ಮಾನ್ಸೂನ್ ಅಧಿವೇಶನ: ಜನಸಂಖ್ಯಾ ನಿಯಂತ್ರಣ, ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆಗೆ ಬಿಜೆಪಿ ಸಿದ್ಧತೆ!

ಮುಂಬರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸಂಸದರು ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಸತ್ತು
ಸಂಸತ್ತು

ನವದೆಹಲಿ: ಮುಂಬರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸಂಸದರು ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಉಭಯ ಸದನಗಳ ಕಾರ್ಯದರ್ಶಿಗಳ ಕಚೇರಿ ಮೂಲಗಳು ಮಾಹಿತಿ ನೀಡಿದ್ದು, ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸಂಸದರು ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಬಿಜೆಪಿ  ಆಡಳಿತವಿರುವ ಮತ್ತು ದೇಶದ ಅತೀ ಹೆಚ್ಚು ಜನಸಂಖ್ಯೆ ಇರುವ ರಾಜ್ಯ ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆ ಕರಡು ಮಸೂದೆ ಜಾರಿಗೆ ಸಿದ್ಧತೆ ನಡೆಸಿದೆ. ಈಗಾಗಲೇ ಕರಡು ಮಸೂದೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಮಂಡಿಸಿ, ಸಾರ್ವಜನಿಕರಿಂದ ಸಲಹೆಗಳನ್ನು  ಆಹ್ವಾನಿಸಿದ್ದು, ಜುಲೈ 19ರವರೆಗೂ ಇದಕ್ಕೆ ಕಾಲಾವಕಾಶ ನೀಡಲಾಗಿದೆ.  

ಸಚಿವರನ್ನು ಹೊರತುಪಡಿಸಿ ಒಬ್ಬ ಸದಸ್ಯ ಪರಿಚಯಿಸಿದ ಮಸೂದೆಯನ್ನು ಖಾಸಗಿ ಸದಸ್ಯರ ಮಸೂದೆ ಎಂದು ಕರೆಯಲಾಗುತ್ತದೆ ಮತ್ತು ಆದರೆ ಇದು ಸರ್ಕಾರದ ಬೆಂಬಲವಿಲ್ಲದೆ ಕಾನೂನಾಗುವ ಸಾಧ್ಯತೆ ಕಡಿಮೆ. ಜುಲೈ 19 ರಿಂದ ಪ್ರಾರಂಭವಾಗಲಿರುವ ಸಂಸತ್ ಅಧಿವೇಶನದ ಮೊದಲ ವಾರದಲ್ಲಿ ಉತ್ತರ  ಪ್ರದೇಶದ ಬಿಜೆಪಿ ಲೋಕಸಭಾ ಸಂಸದ ರವಿ ಕಿಶನ್ ಮತ್ತು ರಾಜಸ್ಥಾನದ ರಾಜ್ಯಸಭಾ ಸಂಸದ ಕಿರೋರಿ ಲಾಲ್ ಮೀನಾ ಕ್ರಮವಾಗಿ ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆ ಕುರಿತ ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಬಿಜೆಪಿ ಸದಸ್ಯರ ಈ ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಪ್ರಸ್ತಾಪಿತ ಶಾಸನಗಳು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಈ ಕುರಿತ ಚರ್ಚೆಗಳು ಆರಂಭವಾಗಿದ್ದು, ಈ ವಿಷಯದಲ್ಲಿ ಬಿಜೆಪಿಯ ನಡೆಗಳನ್ನು  ವಿರೋಧ ಪಕ್ಷಗಳು ಟೀಕಿಸುತ್ತಿವೆ, ಬಿಜೆಪಿ ನಾಯಕರು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಗುರಿಯನ್ನು ಹೊಂದಿದ್ದಾರೆಂದು ಟೀಕಿಸುತ್ತಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳೊಂದಿಗೆ ಲಭ್ಯವಿರುವ ವಿವರಗಳ ಪ್ರಕಾರ, ಕಿಶನ್ ಮತ್ತು ಮೀನಾ ತಮ್ಮ ಖಾಸಗಿ ಸದಸ್ಯರ ಮಸೂದೆಗಳನ್ನು ಜುಲೈ 24 ರಂದು ಪರಿಚಯಿಸಲು ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಇದನ್ನು ಲಾಟರಿ ವ್ಯವಸ್ಥೆಯ ಮೂಲಕ ನಿರ್ಧರಿಸಲಾಗಿದೆ ಎನ್ನಲಾಗಿದೆ.  ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಮಸೂದೆಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ನೋಟಿಸ್ ನೀಡಿದ್ದಾರೆ. 

ಜನಸಂಖ್ಯಾ ನಿಯಂತ್ರಣದ ಪ್ರಸ್ತಾವಿತ ಶಾಸನಗಳು ದಂಪತಿಗಳು ಎರಡು ಮಕ್ಕಳಿಗಿಂತ ಹೆಚ್ಚಿನದನ್ನು ಹೊಂದಿದ್ದರೆ, ಅವರನ್ನು ಸರ್ಕಾರಿ ಉದ್ಯೋಗಗಳಿಗೆ ಅನರ್ಹರನ್ನಾಗಿ ಮಾಡುವ ಮೂಲಕ ಮತ್ತು ಸರ್ಕಾರವು ನೀಡುವ ವಿವಿಧ ಸೌಲಭ್ಯಗಳು ಮತ್ತು ಸರಕುಗಳ ಮೇಲಿನ ಸಬ್ಸಿಡಿಗಳಿಗೆ ಕತ್ತರಿ ಹಾಕಲು ಒತ್ತು  ನೀಡುತ್ತದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಯಾವುದೇ ರೀತಿಯ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುವುದು ಎಂದು ಉತ್ತರ ಪ್ರದೇಶ ಜನಸಂಖ್ಯಾ ನಿಯಂತ್ರಣ ಮಸೂದೆ  ಕರಡು ಹೇಳಿದೆ.

ಬಿಜೆಪಿ ಆಳ್ವಿಕೆಯ ಮತ್ತೊಂದು ರಾಜ್ಯ ಅಸ್ಸಾಂನಲ್ಲಿ ಇದೇ ರೀತಿಯ ಶಾಸನವು ಚರ್ಚೆಯಲ್ಲಿದೆ. ಮಸೂದೆಯ 5, 6 (2) ಮತ್ತು 7 ಸೆಕ್ಷನ್ ಅಡಿಯಲ್ಲಿ, ಸಾರ್ವಜನಿಕ ಸೇವಕರು ಮತ್ತು ಇತರರನ್ನು ಕುಟುಂಬದಲ್ಲಿ ಒಂದೇ ಮಗುವನ್ನು ಹೊಂದಲು ಪ್ರೇರೇಪಿಸುತ್ತದೆ. 

ಏತನ್ಮಧ್ಯೆ, ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಕುಟುಂಬದ ಭಾಗವಾಗಿರುವ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡಿನ ಒಂದು-ಮಕ್ಕಳ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದೆ, ಇದು ವಿವಿಧ ಸಮುದಾಯಗಳ ನಡುವಿನ ಅಸಮತೋಲನವನ್ನು ಮತ್ತಷ್ಟು ಹೆಚ್ಚಿಸುತ್ತದೆ  ಮತ್ತು ಜನಸಂಖ್ಯೆಯನ್ನು ಸಂಕುಚಿತಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.ಮಸೂದೆಯ ಮುನ್ನುಡಿಯಲ್ಲಿ ಇದು ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಎರಡು ಮಕ್ಕಳ ನಿಯಮವನ್ನು ಉತ್ತೇಜಿಸುವ ಮಸೂದೆ ಎಂದು ಹೇಳುತ್ತದೆ. ಇದೇ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿ ಅಧ್ಯಕ್ಷ ಅಲೋಕ್  ಕುಮಾರ್ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ.

ಜನಸಂಖ್ಯೆಯ ಬೆಳವಣಿಗೆಯು ದೇಶಕ್ಕೆ "ಎಚ್ಚರಿಕೆಯ ಗಂಟೆ"ಯಾಗಿದೆ. ಈ ಸಂಬಂಧ ಕೇಂದ್ರ ಕಾನೂನು "ಹೆಚ್ಚು ಅಗತ್ಯ". ಗುರುತಿಸಲಾಗದ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಬೇಕಾಗಿದೆ.ಆಗಸ್ಟ್ 15 ರಂದು ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಬಗ್ಗೆ ಚರ್ಚೆಯಲ್ಲಿ  ನಿರ್ಣಾಯಕ ಹಸ್ತಕ್ಷೇಪ ಮಾಡಿದ್ದಾರೆ ಎಂದು ಹೇಳಿದ ಸಿನ್ಹಾ, ಸಂಪನ್ಮೂಲಗಳು ಮತ್ತು ಜನಸಂಖ್ಯೆಯ ನಡುವೆ ಸಮತೋಲನ ಸಾಧಿಸಲು ಮೋದಿ ಕರೆ ನೀಡಿದ್ದಾರೆ. ಈ ವಿಷಯದ ಕುರಿತು ಪ್ರವಚನವನ್ನು ಜಾತಿ ಮತ್ತು ಧಾರ್ಮಿಕ ಕೋನಗಳ ಮೂಲಕ ನೋಡಬಾರದು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com