ನವದೆಹಲಿ: ಮುಂದಿನ ಮೂರ್ನಾಲ್ಕು ದಿನ ದೇಶದ ಪಶ್ಚಿಮ ಮತ್ತು ಕೇಂದ್ರ ಭಾಗಗಳಲ್ಲಿ ಸತತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮಹಾನಗರಿ ಮುಂಬೈಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಪೂರ್ವ ವಿದರ್ಭ ಪ್ರಾಂತ್ಯ, ಬಂಡಾರಾ, ಚಂದ್ರಾಪುರ, ಗಡ್ಚಿರೊಲಿ ಮತ್ತು ಯವತ್ಮಾಲ್ ಗಳಲ್ಲಿ ಭಾರೀ ಮಳೆ ಸುರಿಯಲಿದ್ದು, 24 ಗಂಟೆ ಕಳೆದ ನಂತರ ಉತ್ತರ ಭಾರತದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಎಚ್ಚರಿಕೆ ಗ್ರೀನ್ ಅಲರ್ಟ್ ನಿಂದ ರೆಡ್ ಅಲರ್ಟ್ ಗೆ ಬದಲಾಗಿದೆ.
ಏನಿದು ಅಲರ್ಟ್: ಹವಾಮಾನ ಇಲಾಖೆ ಗ್ರೀನ್ ಅಲರ್ಟ್ ಘೋಷಿಸಿದರೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದ್ದು ಅಷ್ಟೊಂದು ಅಪಾಯವಿಲ್ಲ. ರೆಡ್ ಅಲರ್ಟ್ ಘೋಷಿಸಿದರೆ ತೀವ್ರ ಎಚ್ಚರಿಕೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಮುನ್ಸೂಚನೆಯಾಗಿರುತ್ತದೆ. ಇನ್ನು ಆರೆಂಜ್ ಅಲರ್ಟ್ ಅಂದರೆ ಅಧಿಕಾರಿಗಳು ಸನ್ನದ್ಧವಾಗಿರಬೇಕು ಎಂದರ್ಥ.
ಚಂಡಮಾರುತದ ಪ್ರಸರಣವು ಬಂಗಾಳದ ವಾಯವ್ಯ ಕೊಲ್ಲಿಯಲ್ಲಿದ್ದು, ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ ಮತ್ತು 7.6 ಕಿ.ಮೀ.ವರೆಗೆ ವಿಸ್ತರಿಸಿದೆ. ಇದು ಸಮುದ್ರ ಮಟ್ಟದಿಂದ ನೈರುತ್ಯ ದಿಕ್ಕಿನಲ್ಲಿ ಎತ್ತರಕ್ಕೆ ತಿರುಗುತ್ತದೆ. ಅದರ ಪ್ರಭಾವದಡಿಯಲ್ಲಿ, ಮುಂದಿನ 48 ಗಂಟೆಗಳಲ್ಲಿ ವಾಯವ್ಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆಯಲ್ಲಿ ಕಡಿಮೆ-ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಿನ್ನೆಯಿಂದ ನಾಳೆಯವರೆಗೆ ವಿದರ್ಭದಲ್ಲಿ ಮಾನ್ಸೂನ್ ಸಕ್ರಿಯವಾಗಿ ಉಳಿಯುವ ನಿರೀಕ್ಷೆಯಿದೆ.
Advertisement