ನವದೆಹಲಿ: ಪಂಜಾಬ್ ಕಾಂಗ್ರೆಸ್ ಘಟಕದಲ್ಲಿನ ಸಮಸ್ಯೆ ಬಗೆಹರಿಸಿದ ನಂತರ ಇದೀಗ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಣ ಭಿನ್ನಾಭಿಪ್ರಾಯನ್ನು ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಗಮನ ಕೇಂದ್ರೀಕರಿಸಿದೆ. ಈ ಕುರಿತ ನಿರ್ಧಾರವನ್ನು ಶೀಘ್ರವೇ ಕೈಗೊಳ್ಳುವ ಸಾಧ್ಯತೆಯಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೈಪುರಕ್ಕೆ ಭೇಟಿ ನೀಡಿದ್ದು, ಗೆಹ್ಲೋಟ್, ಸಚಿನ್ ಪೈಲಟ್, ಪಕ್ಷದ ಶಾಸಕರು ಹಾಗೂ ಮುಖಂಡರ ಭೇಟಿ ನಿಗದಿಯಾಗಿದೆ. ರಾಜಸ್ಥಾನ ಕಾಂಗ್ರೆಸ್ ಪುನರ್ ರಚನೆ ಧೀರ್ಘ ಕಾಲದ ಬೇಡಿಕೆಯಾಗಿದೆ. ಈ ಸಂಬಂಧ ಅನೇಕ ಸಲ ಪೈಲಟ್ ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಜೈಪುರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ರಾಜಸ್ಥಾನದಿಂದ ರಾಜ್ಯಸಭೆ ಸದಸ್ಯನಾಗಿದ್ದು, ಕೆಲಸದ ಸಂಬಂಧ ಜೈಪುರಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು. ಪಂಜಾಬ್ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾವಣೆ ಸಾಧ್ಯತೆಯಿದ್ದು, ಸಚಿನ್ ಪೈಲಟ್ ಗುಂಪಿನ ಸದಸ್ಯರಿಗೆ ರಾಜ್ಯ ಕ್ಯಾಬಿನೆಟ್, ಪಕ್ಷ ಹಾಗೂ ರಾಜ್ಯ ಮಂಡಳಿಯಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.
Advertisement