ಮುಂಬೈ: ನಿರಂತರ ಮಳೆಯ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ರಾಜ್ಯದ 13 ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಿದ್ದು, ಸುಮಾರು 251 ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇನ್ನೂ 100 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮಾನದಂಡಗಳ ಪ್ರಕಾರ ರಾಜ್ಯ ಸರ್ಕಾರ ನೆರವು ಘೋಷಿಸಿದೆ ಎಂದು ಎನ್ಸಿಪಿ ಮುಖಂಡ ತಿಳಿಸಿದ್ದಾರೆ.
"ಪ್ರವಾಹವು ಮನೆಗಳು ಮತ್ತು ಬೆಳೆಗಳನ್ನು ಹಾನಿ ಮಾಡಿದೆ. ಪ್ರವಾಹ ಪೀಡಿತ ಜನರಿಗೆ ನೆರವು ನೀಡುವ ನಿರ್ಧಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಮತ್ತು ನಮ್ಮ ಪಕ್ಷದ ಕಡೆಯಿಂದ ಸಹಾಯ ಮಾಡಲು ನಾವು ಯೋಜಿಸುತ್ತಿದ್ದೇವೆ" ಎಂದು ಮಲಿಕ್ ಹೇಳಿದರು.
ಜೀವ ಉಳಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಿದ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಬಿಜೆಪಿ ನಾಯಕರು ಮಾತನಾಡುವ ರೀತಿ ಮಹಾರಾಷ್ಟ್ರದ ಸಂಸ್ಕೃತಿಯಲ್ಲ ಎಂದು ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
"ರಾಜ್ಯದ ಜನರ ಜೀವ ಉಳಿಸಲು ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಕೂಡ ಹೇಳಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತನಾಡುವ ರೀತಿ ಸರಿಯಾಗಿಲ್ಲ. ಅವರು ಬಳಸುತ್ತಿರುವ ಭಾಷೆ ಮಹಾರಾಷ್ಟ್ರದ ಸಂಸ್ಕೃತಿಯಲ್ಲ ಎಂದರು.
Advertisement