ಶ್ರೀನಗರ: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಕಾಶ್ಮೀರದ ಅರ್ನಿಯಾ ಸೆಕ್ಟರ್ ನಲ್ಲಿನ ಬಿಎಸ್ ಎಫ್ ಪೋಸ್ಚ್ ಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಸೈನಿಕರು ದಾಳಿ ನಡೆಸಿದ್ದು, ಫೆಬ್ರವರಿ 25ರ ಬಳಿಕ ಗಡಿಯಲ್ಲಿ ನಡೆದ 2ನೇ ಕದನ ವಿರಾಮ ಉಲ್ಲಂಘನೆ ಪ್ರಕರಣ ಇದಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಅಂತಯೇ ಬಿಎಸ್ ಎಫ್ ಪಡೆಗಳೂ ಕೂಡ ಪಾಕಿಸ್ತಾನಿ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆ ಫೆಬ್ರವರಿ 25 ರಿಂದ ಶಾಂತಿಯುತವಾಗಿತ್ತು. ಇಲ್ಲಿನ ಸ್ಥಳೀಯ ನಿವಾಸಿಗಳು ಕೂಡ ನಿರ್ಭೀತಿಯಿಂದ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ದರು. ಸ್ಥಳೀಯ ಕೃಷಿಕರು ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿರುವ ತಮ್ಮ ತಮ್ಮ ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನೂ ಕೂಡ ಆರಂಭಿಸಿದ್ದರು. ಆದರೆ ಪಾಕ್ ಸೈನಿಕರ ಅಪ್ರಚೋದಿತ ದಾಳಿಯಿಂದಾಗಿ ಅವರು ಇದೀಗ ಜೀವಭಯದಲ್ಲಿ ಸಮಯ ಕಳೆಯುವಂತಾಗಿದೆ.
Advertisement