ಕೋವಿಡ್-19: ಗ್ರಾಮದ ಶೇ.100 ವಯಸ್ಕರಿಗೆ ಲಸಿಕೆ ನೀಡಿ ಜಮ್ಮು-ಕಾಶ್ಮೀರದ ಈ ಕುಗ್ರಾಮ ಇತರರಿಗೆ ಮಾದರಿ!

ಕೊರೋನಾ 2ನೇ ಅಲೆ ಜೋರಾಗಿದ್ದರೂ ದೇಶದ ಹಲವು ಗ್ರಾಮಗಳಲ್ಲಿ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಇದಕ್ಕೆ ಲಸಿಕೆಯ ಬಗ್ಗೆ ಹಿಂದೆ ಹುಟ್ಟಿದ್ದ ಭಯ ಕಾರಣ. ಆದರೆ, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿರುವ ಕುಗ್ರಾಮವೊಂದು ಇದಕ್ಕೆ ತದ್ವಿರುದ್ಧವಾಗಿ ನಿಂತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕೊರೋನಾ 2ನೇ ಅಲೆ ಜೋರಾಗಿದ್ದರೂ ದೇಶದ ಹಲವು ಗ್ರಾಮಗಳಲ್ಲಿ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಇದಕ್ಕೆ ಲಸಿಕೆಯ ಬಗ್ಗೆ ಹಿಂದೆ ಹುಟ್ಟಿದ್ದ ಭಯ ಕಾರಣ. ಆದರೆ, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿರುವ ಕುಗ್ರಾಮವೊಂದು ಇದಕ್ಕೆ ತದ್ವಿರುದ್ಧವಾಗಿ ನಿಂತಿದೆ. ಈ ಕುಗ್ರಾಮದಲ್ಲಿ ಶೇ.100ರಷ್ಟು ವಯಸ್ಕರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡುವಿಕೆಯಲ್ಲಿ ಶೇ.100 ರಷ್ಟು ಗುರಿ ತಲುಪಿದ ಮೊದಲ ಗ್ರಾಮ ಎನಿಸಿಕೊಂಡಿದೆ. 

ಬಂಡಿಪೋರಾದ ವೆಯಾನ್ ಯಾವುದೇ ಮೂಲಸೌಕರ್ಯ ಇಲ್ಲದಿರುವ ಒಂದು ಕುಗ್ರಾಮವಾಗಿದ್ದು, ಆರಂಭದಲ್ಲಿ ಗ್ರಾಮದಲ್ಲಿರುವ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ನಂತರ ಆರೋಗ್ಯ ಕಾರ್ಯಕರ್ತ ಕಠಿಣ ಶ್ರಮದಿಂದಾಗಿ ಗ್ರಾಮ ಇದೀಗ ರಾಷ್ಟ್ರೀಯ ಖ್ಯಾತಿ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಬಂಡಿಪೋರಾ ಜಿಲ್ಲೆಯ ಪ್ರಧಾನ ಕಚೇರಿಯಿಂದ 28 ಕಿಮೀ ದೂರದಲ್ಲಿ ಗ್ರಾಮವಿದೆ. ಆದರೆ, ವಾಹನಗಳಲ್ಲಿ ಚಲಿಸಲು ಸೂಕ್ತ ರೀತಿಯ ರಸ್ತೆ ಸಂಪರ್ಕಗಳಿಲ್ಲದ ಕಾರಣ ಗ್ರಾಮಕ್ಕೆ ಕಾಲ್ನಡಿಗೆ ಮೂಲಕವೇ ಸಾಗಬೇಕು. ಗ್ರಾಮದಲ್ಲಿ ಅಲೆಮಾರಿ ಕುಟುಂಬಗಳು ಇದ್ದು, ಜಾನುವಾರುಗಳನ್ನು ಮೇಯಿಸಲು ಹೆಚ್ಚಿನ ಪ್ರದೇಶಗಳಿಗೆ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ನೀಡುವುದು ಕಷ್ಟಕರವಾಗಿತ್ತು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹೇಳಿದ್ದಾರೆ. 

ಗ್ರಾಮದಲ್ಲಿ ಇಂಟರ್ನೆಟ್ ಸೌಲಭ್ಯ ಕೂಡ ಇಲ್ಲ. ಆದ್ದರಿಂದ ನಗರವಾಸಿಗಳಿರುವ ಸೌಲಭ್ಯಗಳು ಇಲ್ಲಿನ ಜನರಿಗೆ ಇಲ್ಲದ ಕಾರಣ ಈ ಪ್ರದೇಶದ ಜನರು ಲಸಿಕೆಗೆ ತಮ್ಮ ಹೆಸರು ದಾಖಲು ಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಬಶೀರ್ ಅಹ್ಮದ್ ಖಾನ್ ಅವರು ಆರೋಗ್ಯ ಸಿಬ್ಬಂದಿಗಳು ಎದುರಿಸಿದ ಸವಾಲುಗಳನ್ನು ವಿವರಿಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರ ಮಾದರಿಯಂತೆಯೇ ಗ್ರಾಮದಲ್ಲಿ ಲಸಿಕೆ ನೀಡಲಾಗಿತ್ತು. ಲಸಿಕೆ ನೀಡಲು 10 ಅಂಶಗಳುಳ್ಳ ತಂತ್ರಗಳನ್ನು ಬಳಕೆ ಮಾಡಲಾಗಿತ್ತು. ಇದರಿಂದ ಗ್ರಾಮದ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಲಾಯಿತು. ಆರಂಭದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ನಂತರ ಜನರ ಮನವೊಲಿಸಿ 45 ವರ್ಷ ಮೇಲ್ಪಟ್ಟ ಶೇ.70ರಷ್ಟು ಜನರಿಗೆ ಲಸಿಕೆ ನೀಡಲಾಗಿತ್ತು. ದೇಶದ ಸರಾಸರಿಗೆ ಹೋಲಿಕೆ ಮಾಡಿದರೆ, ಈ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಾಧ್ಯಮ ಸಲಹೆಗಾರ ಯತೀಶ್ ಯಾದವ್ ಅವರು ಈ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆರೋಗ್ಯ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com