The New Indian Express
ನವದೆಹಲಿ: ಕೇಂದ್ರ ಸಂಪುಟ ಪುನಾರಚನೆ ಕುರಿತು ಸುದ್ದಿ ವ್ಯಾಪಕವಾಗಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
2019 ರ ಮೇನಲ್ಲಿ ಎರಡನೇ ಬಾರಿಗೆ ಸರ್ಕಾರ ರಚಿಸಿದ್ದ ಮೋದಿ ಸರ್ಕಾರ 2 ವರ್ಷಗಳನ್ನು ಪೂರೈಸಿದ್ದು, ಈ 2 ವರ್ಷಗಳಲ್ಲಿ ಮೋದಿ ಸರ್ಕಾರ ಸಂಪುಟ ಪುನಾರಚನೆ ಮಾಡಿರಲಿಲ್ಲ. ಹೀಗಾಗಿ ಈಗ ಮೋದಿ ಸಂಪುಟ ಪುನಾರಚನೆ ಮಾಡಲು ಮುಂದಾಗಿದ್ದು. ಇದೇ ಕಾರಣಕ್ಕೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಇದನ್ನೂ ಓದಿ: 2 ವರ್ಷಗಳ ಪ್ರಗತಿ ಪರಿಶೀಲನೆ; ಸಚಿವರ ಜೊತೆ ಪ್ರಧಾನಿ ಮೋದಿ ಸಭೆ
ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡು ದಿನಗಳ ರಾಷ್ಟ್ರ ರಾಜಧಾನಿ ಭೇಟಿಯಲ್ಲಿ ಬಿಜೆಪಿಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಈ ಬೆಳವಣೆಗೆ ಉತ್ತರಪ್ರದೇಶದಲ್ಲಿ ಕ್ಯಾಬಿನೆಟ್ ವಿಸ್ತರಣೆಯ ಬಗೆಗಿನ ಊಹಾಪೋಹಗಳಿಗೆ ಕಾರಣವಾಗಿದ್ದು, ಇದರ ಮಧ್ಯೆಯೇ ಪ್ರಧಾನಿ ಮೋದಿ ವಿವಿಧ ಖಾತೆಗಳ ಕೇಂದ್ರ ಸಚಿವರೊಂದಿಗೆ ಸರಣಿ ಸಭೆ ನಡೆಸಿದ್ದಾರೆ. ಇದೂ ಕೂಡ ಕೇಂದ್ರ ಸಚಿವ ಸಂಪುಟ ಪುನಾರಚನೆ ಊಹಾಪೋಹಗಳು ಗರಿಗೆದರುವಂತೆ ಮಾಡಿದೆ.
ಮೊದಲ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅಪ್ನಾ ದಳದ ಅನುಪ್ರಿಯಾ ಪಟೇಲ್ ಸೇರಿದಂತೆ ಉತ್ತರ ಪ್ರದೇಶದ ಪಕ್ಷದ ಮಿತ್ರಪಕ್ಷಗಳ ನಾಯಕರನ್ನು ಶಾ ಭೇಟಿಯಾದ ಒಂದು ದಿನದ ನಂತರ ಪ್ರಧಾನಿ ನಿವಾಸದಲ್ಲಿ ಬಿಜೆಪಿಯ ಉನ್ನತ ನಾಯಕರ ನಡುವೆ ಸಭೆಗಳು ನಡೆಯುತ್ತಿವೆ. ಈ ಸಭೆಗಳಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಕೂಡ ಪಾಲ್ಗೊಂಡಿರುವುದು ಕೇಂದ್ರ ಸಂಪುಟ ಪುನಾರಚನೆ ಫಿಕ್ಸ್ ಎಂಬ ಮಾತುಗಳಿಗೆ ಪುಷ್ಠಿ ನೀಡುತ್ತಿವೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಆದರೆ ಈ ಬಗ್ಗೆ ಬಿಜೆಪಿಯಿಂದ ಯಾವುದೇ ಅಧಿಕತ ಮಾಹಿತಿ ಹೊರಬಿದ್ದಿಲ್ಲ. ಆದರೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೇಸರಿ ಪಡೆ ನಡೆಸಿದ ಪರಿಹಾರ ಕಾರ್ಯಗಳ ಜೊತೆಗೆ, ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಅದರ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೇ ಉತ್ತರ ಪ್ರದೇಶ ಸೇರಿದಂತೆ ಮುಂದಿನ ವರ್ಷದ ಆರಂಭದಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಬಿಜೆಪಿ ಪಕ್ಷ ಸಜ್ಜಾಗುತ್ತಿದೆ. ಈ ಚುನಾವಣೆಗಳ ಸಾಮಾಜಿಕ ಸಮೀಕರಣವನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.