2022 ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಎಸ್'ಪಿಯೊಂದಿಗೆ ಮೈತ್ರಿ: ಅಕಾಲಿ ದಳ ಘೋಷಣೆ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ಜಾರಿಗೆ ತಂದ ನಂತರ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದ್ದ ಶಿರೋಮಣಿ ಅಕಾಲಿ ದಳ ಮುಂಬರುವ (2022) ವಿಧಾನಸಭಾ ಚುನಾವಣೆಯಲ್ಲಿ ಬಹುಜನ್ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವುದಾಗಿ ಶನಿವಾರ ಘೋಷಣೆ ಮಾಡಿದೆ. 
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ (ಸಂಗ್ರಹ ಚಿತ್ರ)
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ (ಸಂಗ್ರಹ ಚಿತ್ರ)

ಚಂಡೀಗಢ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ಜಾರಿಗೆ ತಂದ ನಂತರ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದ್ದ ಶಿರೋಮಣಿ ಅಕಾಲಿ ದಳ ಮುಂಬರುವ (2022) ವಿಧಾನಸಭಾ ಚುನಾವಣೆಯಲ್ಲಿ ಬಹುಜನ್ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವುದಾಗಿ ಶನಿವಾರ ಘೋಷಣೆ ಮಾಡಿದೆ. 

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಬಿಎಸ್'ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪಂಜಾಬ್ ರಾಜ್ಯದ ರಾಜಕೀಯದಲ್ಲಿ ಹೊಸ ದಿನಗಳು ಆರಂಭವಾಗಿವೆ ಎಂದು ಹೇಳಿದ್ದಾರೆ. 

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಎಸ್'ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು, ಇಂದು ಐತಿಹಾಸಿಕ ದಿನವಾಗಿದೆ. ಪಂಜಾಬ್ ರಾಜ್ಯ ರಾಜಕೀಯ ದೊಡ್ಡ ತಿರುವೊಂದನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ. 

2022ರ ಪಂಜಾಬ್ ವಿಧಾನಸಬಾ ಚುನಾವಣೆಯಲ್ಲಿ ಎಸ್'ಎಡಿ ಹಾಗೂ ಬಿಎಸ್'ಪಿ ಪಕ್ಷ ಮೈತ್ರಿ ಮಾಡಿಕೊಳ್ಳುತ್ತಿದ್ದು, ಒಟ್ಟಿಗೆ ಕಣಕ್ಕಿಳಿಯಲಿದೆ ಎಂದು ತಿಳಿಸಿದ್ದಾರೆ. 

ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್'ಪಿ ಪಕ್ಷ 117 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳಲ್ಲಿ ಅಕಾಲಿ ದಳ ಸ್ಪರ್ಧಿಸಲಿದೆ. 

ಚುನಾವಣೆಯಲ್ಲಿ ಬಿಎಸ್'ಪಿ ಪಕ್ಷ ಜಲಂಧರ್'ನ ಕರ್ತಾರ್ಪುರ ಸಾಹೀಬ್, ಜಲಂಧರ್ ಪಶ್ಚಿಮ, ಜಲಂಧರ್ ಉತ್ತರ, ಫಾಗ್ವಾರಾ, ಹೋಶಿಯಾರ್ಪುರ್ ಅರ್ಬನ್, ದಾಸುಯಾ, ರುಪ್‌ನಗರ ಜಿಲ್ಲೆಯ ಚಮಕೌರ್ ಸಾಹಿಬ್, ಬಸ್ಸಿ ಪಥಾನಾ, ಪಠಾಣ್‌ಕೋಟ್‌ನ ಸುಜನ್‌ಪುರ, ಮೊಹಾಲಿ, ಅಮೃತಸರ ಉತ್ತರ ಮತ್ತು ಅಮೃತಸರ ಕೇಂದ್ರದಲ್ಲಿ ಸ್ಪರ್ಧಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

1996ರ ಲೋಕಸಭಾ ಚುನಾವಣೆಯ 27 ವರ್ಷಗಳ ನಂತರ ಅಕಾಲಿ ದಳ ಮತ್ತು ಬಿಎಸ್ಇ ಮತ್ತೆ ಕೈಜೋಡಿಸಿದೆ. 1996ರಲ್ಲಿ ಅಕಾಲಿದಳ, ಬಿಎಸ್ಪಿ ಮೈತ್ರಿ ಪಂಜಾಬ್ ನ 13 ಸ್ಥಾನಗಳಲ್ಲಿ 11 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮಾಯಾವತಿ ನೇತೃತ್ವದ ಬಿಎಸ್ಪಿ ಸ್ಪರ್ಧಿಸಿದ್ದ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಅಕಾಲಿ ದಳ 10ರಲ್ಲಿ ಎಂಟು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು ಎಂದು ವರದಿ ತಿಳಿಸಿದೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ ಇತರ ಪಕ್ಷದ ಜತೆ ತಮ್ಮ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದೆ ಎಂದು ಸುಖ್ ಬೀರ್ ಸಿಂಗ್ ಬಾದಲ್ ಅವರು ಈ ಹಿಂದೆ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com