ಜೈಪುರ: ರಾಜಸ್ಥಾನದ ಸರ್ಕಾರದಲ್ಲಿನ ಬಿರುಕು ಮತ್ತಷ್ಟು ಉಲ್ಬಣಗೊಂಡಿದೆ. ಈ ಬಾರಿ ಸಚಿನ್ ಪೈಲಟ್ ಬಣದ ಶಾಸಕರಿಂದ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿದೆ.
ಜೈಪುರ ಜಿಲ್ಲೆಯ ಚಕ್ಸು ಕ್ಷೇತ್ರದ ಶಾಸಕ, ಸಚಿನ್ ಪೈಲಟ್ ನ ಆಪ್ತ ವೇದ್ ಪ್ರಸಾದ್ ಸೋಲಂಕಿ ಆರೋಪ ಮಾಡಿದ್ದು, ಕೆಲವು ಶಾಸಕರು ತಮ್ಮ ಫೋನ್ ಕದ್ದಾಲಿಕೆಯಾಗುತ್ತಿರುವ ಆರೋಪ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಆದರೆ ಕದ್ದಾಲಿಕೆ ಆರೋಪ ಮಾಡುತ್ತಿರುವ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಕ್ಕೆ ಸೋಲಂಕಿ ನಿರಾಕರಿಸಿದ್ದಾರೆ.
"ನನ್ನ ಫೋನ್ ಕದ್ದಾಲಿಕೆಯಾಗುತ್ತಿದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ಸರ್ಕಾರ ಫೋನ್ ಕದ್ದಾಲಿಕೆ ನಡೆಸುತ್ತಿದೆಯೋ ಇಲ್ಲವೋ ಎಂಬುದೂ ನನಗೆ ತಿಳಿದಿಲ್ಲ. ಆದರೆ ಕೆಲವು ಶಾಸಕರು ತಮ್ಮ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ" ಎಂದು ಆರೋಪಿಸಿರುವುದಾಗಿ ಸೋಲಂಕಿ ಹೇಳಿದ್ದಾರೆ.
ಸರ್ಕಾರದ ಬಗ್ಗೆ ಸಚಿನ್ ಪೈಲಟ್ ಅಸಾಮಾಧಾನಗೊಂಡಿದ್ದು, ದೆಹಲಿಯಲ್ಲಿ ಕ್ಯಾಂಪ್ ಮಾಡಿದ್ದಾರೆ. ಸಚಿನ್ ಪೈಲಟ್ ಅವರ ಆಪ್ತರು ಸಚಿವ ಸಂಪುಟ ಪುನಾರಚನೆ ಮಾಡುವುದಕ್ಕಾಗಿ ಆಗ್ರಹಿಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
Advertisement