ಕೇಂದ್ರದ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಲು ಗುಪ್ಕಾರ್ ಮೈತ್ರಿಕೂಟ ನಿರ್ಧಾರ: ಆರ್ಟಿಕಲ್ 370 ಮರುಸ್ಥಾಪನೆಗೆ ಬೇಡಿಕೆ 

ಪ್ರಧಾನಿ ನರೇಂದ್ರ ಮೋದಿ ಜೂ.24 ರಂದು ಆಯೋಜಿಸಿರುವ ಜಮ್ಮು-ಕಾಶ್ಮೀರ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಲು ಜಮ್ಮು-ಕಾಶ್ಮೀರದ ಗುಪ್ಕಾರ್ ಮೈತ್ರಿಕೂಟ ನಿರ್ಧರಿಸಿದೆ.
ಗುಪ್ಕಾರ್ ಮೈತ್ರಿಕೂಟದ ನಾಯಕರು (ಸಂಗ್ರಹ ಚಿತ್ರ)
ಗುಪ್ಕಾರ್ ಮೈತ್ರಿಕೂಟದ ನಾಯಕರು (ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.24 ರಂದು ಆಯೋಜಿಸಿರುವ ಜಮ್ಮು-ಕಾಶ್ಮೀರ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಲು ಜಮ್ಮು-ಕಾಶ್ಮೀರದ ಗುಪ್ಕಾರ್ ಮೈತ್ರಿಕೂಟ ನಿರ್ಧರಿಸಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಮರುಸ್ಥಾಪನೆಗೆ ಹಾಗೂ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಆರೂ ಪಕ್ಷಗಳ ಮೈತ್ರಿಕೂಟ ಈ ಸಭೆಯಲ್ಲಿ ಒತ್ತಾಯಿಸಲಿವೆ.

"ನವದೆಹಲಿಯಲ್ಲಿ ಜೂ.24 ರಂದು ನಡೆಯಲಿರುವ ಸಭೆಯಲ್ಲಿ ಗುಪ್ಕಾರ್ ಮೈತ್ರಿಕೂಟದ ಎಲ್ಲಾ ಪಕ್ಷಗಳೂ ಭಾಗಿಯಾಗಲು ನಿರ್ಧರಿಸಿವೆ ಎಂದು ಗುಪ್ಕಾರ್ ಮೈತ್ರಿಕೂಟದ ಅಧ್ಯಕ್ಷ ಹಾಗೂ ಎನ್ ಸಿಯ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಗುಪ್ಕಾರ್ ಮೈತ್ರಿಯ ನಾಯಕರಾದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಓಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಹಾಗೂ ಸಿಪಿಎಂ ನಾಯಕ ಮೊಹಮ್ಮದ್ ಯೂಸೂಫ್ ತಾರಿಗಮಿ ಸೇರಿದಂತೆ 14 ಮಂದಿ ಜಮ್ಮು-ಕಾಶ್ಮೀರದ ನಾಯಕರಿಗೆ ಜೂ.24 ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಆಹ್ವಾನವಿತ್ತು.

"ಕೇಂದ್ರ ಸರ್ಕಾರ ಈ ವರೆಗೂ ಸಭೆಯ ಅಜೆಂಡಾವನ್ನು ಸ್ಪಷ್ಟಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಯಾವುದೇ ವಿಷಯ ಹಾಗೂ ಎಲ್ಲಾ ವಿಷಯಗಳನ್ನೂ ಚರ್ಚಿಸಬಹುದು. ನಮ್ಮ ನಿಲುವು ಈಗಾಗಲೇ ಎಲ್ಲರಿಗೂ ತಿಳಿದಿದೆ" ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ

"ಗುಪ್ಕಾರ್ ಮೈತ್ರಿಕೂಟದ ವಕ್ತಾರ ಸಿಪಿಐ(ಎಂ) ನ ನಾಯಕ ಮೊಹಮ್ಮದ್ ಯೂಸೂಫ್ ತಾರಿಗಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತಮ್ಮ ನಿಲುವು ಬೇಡಿಕೆಗಳನ್ನು ಪ್ರಧಾನಿ ಎದುರು ಮಂಡಿಸುವುದಾಗಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ನ ಜನತೆಗೆ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಭಾರತದ ಸಂವಿಧಾನದಲ್ಲಿ ನಮೆಗೆ ಯಾವೆಲ್ಲಾ ಖಾತರಿಗಳಿವೆಯೊ ಅವುಗಳ ರಕ್ಷಣೆ, ಸುರಕ್ಷತೆಗೆ ನಾವು ಪ್ರಧಾನಿಗಳಲ್ಲಿ ಮನವಿ ಮಾಡಲಿದ್ದೇವೆ, ಆ.05, 2019 ರ ನಿರ್ಧಾರವನ್ನೂ ಮರುಪರಿಶೀಲಿಸಲು ಪ್ರಧಾನಿಗೆ ಮನವಿ ಮಾಡುತ್ತೇವೆ" ಎಂದು ಗುಪ್ಕಾರ್ ಮೈತ್ರಿಕೂಟದ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com