ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧದ ಏಳು ತಿಂಗಳ ಹೋರಾಟದ ಅಂಗವಾಗಿ ಶನಿವಾರ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ರೈತರ ಮೇಲೆ ದಾಖಲಾಗಿರುವ ಕೇಸ್ ಗಳನ್ನು ವಾಪಸ್ ಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಒತ್ತಾಯಿಸಿದೆ.
ಹಲವು ಆರೋಪಗಳಲ್ಲಿ ಅನೇಕ ರೈತ ಮುಖಂಡರ ವಿರುದ್ಧ ಚಂಡೀಘಡ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಏಳು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಶನಿವಾರ ರೈತರು ಮನವಿ ಸಲ್ಲಿಸಲು ರಾಜಭವನದವರೆಗೂ ಮೆರವಣಿಗೆ ನಡೆಸಿದ್ದರು.
ಚಂಡೀಘಡದಲ್ಲಿ ಅನೇಕ ರೈತ ಹೋರಾಟಗಾರರು ಮತ್ತಿತರರ ವಿರುದ್ಧ ಐಪಿಸಿ ಸೆಕ್ಷನ್ 147,148,149,186,188,332 ಮತ್ತು 353 ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಎಸ್ ಕೆಎಂ ಹೇಳಿಕೆಯಲ್ಲಿ ತಿಳಿಸಿದೆ. ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ ನಂತರ ಜಲ ಪ್ರಯೋಗ ಮಾಡಿ ರೈತರ ಮೇಲೆ ಲಾಠಿಜಾರ್ಜ್ ಮಾಡಲಾಯಿತು ಎಂದು ರೈತ ಸಂಘಟನೆ ಆರೋಪಿಸಿದೆ.
ರೈತ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸಿರುವುದು ಅಪ್ರಜಾಸತಾತ್ಮಕ ಮತ್ತು ಸರ್ವಾಧಿಕಾರಿ ವರ್ತನೆಯಾಗಿದೆ, ಕೂಡಲೇ ಮತ್ತು ಬೇಷರತ್ತಾಗಿ ಎಫ್ ಐಆರ್ ಹಿಂಪಡೆಯಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ.
Advertisement