ನವದೆಹಲಿ: ಲಸಿಕೆ ಕುರಿತಂತೆ ಆತಂಕದಲ್ಲಿದ್ದ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ಮೋದಿ ಲಸಿಕೆ ತೆಗೆದುಕೊಳ್ಳುವಂತೆ ಗ್ರಾಮಸ್ಥ ಮನವೊಲಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದ್ದು, 'ಹಿಂಜರಿಕೆ ಬದಿಗೊತ್ತಿ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಪ್ರಧಾನಿ ಮೋದಿ ಅವರ ಮಾತಿನಿಂದ ಪ್ರೇರಣೆ ಪಡೆದ ಮಧ್ಯಪ್ರದೇಶದ ದುಲಾರಿಯಾ ಎಂಬ ಹಳ್ಳಿಯ ವ್ಯಕ್ತಿ ಮತ್ತು ಆತನ ಕುಟುಂಬಸ್ಥರು ಭಾನುವಾರ ಲಸಿಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ ಗ್ರಾಮಸ್ಥರನ್ನು ಲಸಿಕೆ ಪಡೆಯುವ ಹಿಂಜರಿಕೆಯಿಂದ ಹೊರತಂದು ಲಸಿಕೆ ಪಡೆಯುವಂತೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ದುಲಾರಿಯಾ ಗ್ರಾಮದ ಹಳ್ಳಿ ಜನರೊಂದಿಗೆ ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಲಸಿಕೆ ಅಭಿಯಾನದ ಬಗ್ಗೆ ಮಧ್ಯಪ್ರದೇಶದ ದುಲಾರಿಯಾ ಗ್ರಾಮಸ್ಥರಿಗೆ ಇರುವ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದ ಮೋದಿ ಅವರು, ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದಾರೆ.
ಮನ್ ಕಿ ಬಾತ್ ನಲ್ಲಿ ಸಂಭಾಷಣೆ ಪ್ರಸಾರ
ಇನ್ನು ಈ ವಿಶೇಷ ಸಂಭಾಷಣೆಯನ್ನು ಪ್ರಧಾನ ಮಂತ್ರಿಗಳ ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಲಾಯಿತು.
ಪ್ರಧಾನಿ ಅವರೊಂದಿಗೆ ಮಾತಾಡಿದ ಗ್ರಾಮಸ್ಥರ ಪೈಕಿ ಒಬ್ಬರಾಗಿರುವ ರಾಜೇಶ್ ಹಿರವೆ (43 ವರ್ಷ) ಎಂಬುವವರು, 'ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ ನಂತರ, ನಾನು ಮತ್ತು ನನ್ನ ಕುಟುಂಬ ಸದಸ್ಯರು ಶನಿವಾರ ಕೋವಿಡ್ ಲಸಿಕೆ ಪಡೆದಿದ್ದೇವೆ. ಲಸಿಕೆ ಪಡೆಯುವಂತೆ ನಾನು ಇತರೆ ಗ್ರಾಮಸ್ಥರನ್ನೂ ಪ್ರೋತ್ಸಾಹಿಸಿದೆ. ಪ್ರತಿಫಲವಾಗಿ ಗ್ರಾಮದ 127 ಜನರಿಗೆ ಲಸಿಕೆ ಕೊಡಿಸಲಾಗಿದೆ. ಲಸಿಕೆಯ ಕುರಿತು ವಾಟ್ಸ್ಆ್ಯಪ್ನಲ್ಲಿ ತಪ್ಪು ಸಂದೇಶಗಳು ಹರಿದಾಡುತ್ತಿದ್ದು, ಇದನ್ನೇ ನಂಬಿರುವ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನರೇಂದ್ರ ಮೋದಿ ಅವರು, ‘ನಾನು ಮತ್ತು ನನ್ನ 100 ವರ್ಷಗಳ ತಾಯಿಯೂ ಎರಡು ಡೋಸ್ ಲಸಿಕೆ ಪಡೆದಿದ್ದೇವೆ. ವದಂತಿಗಳನ್ನು ನಂಬಬೇಡಿ. ವಿಜ್ಞಾನ ಮತ್ತು ವಿಜ್ಞಾನಿಗಳನ್ನು ನಂಬಿ ಎಂದು ಜನರನ್ನು ಕೇಳಿಕೊಂಡಿದ್ದರು.
Advertisement