ಎನ್ ಐಎ ಕಸ್ಟಡಿಯಲ್ಲಿ ತೀವ್ರ ಕಿರುಕುಳ; ಬಿಜೆಪಿ ಸೇರಿದರೆ ಜಾಮೀನು ದೊರಕಿಸುವ ಆಮಿಷ: ಅಖಿಲ್ ಗೊಗೋಯ್
ಜೈಲಿನಲ್ಲಿ ತನನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಜೈಲಿನಿಂದಲೇ ಪತ್ರ ಬರೆದಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೋಯ್, ಬಿಜೆಪಿ ಅಥವಾ ಆರ್ ಎಸ್ ಎಸ್ ಗೆ ಸೇರ್ಪಡೆಯಾದರೆ ಜಾಮೀನು ನೀಡುವುದಾಗಿ ಎನ್ ಐಎ ವಿಚಾರಣಾಧಿಕಾರಿಗಳು ಆಮಿಷವೊಡಿದ್ದರು ಎಂದು ತಿಳಿಸಿದ್ದಾರೆ.
Published: 23rd March 2021 07:14 PM | Last Updated: 23rd March 2021 07:45 PM | A+A A-

ಅಸ್ಸಾಂ ಹೋರಾಟಗಾರ ಅಖಿಲ್ ಗೊಗೋಯ್
ಗುವಾಹಟಿ: ಜೈಲಿನಲ್ಲಿ ತನನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಜೈಲಿನಿಂದಲೇ ಪತ್ರ ಬರೆದಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೋಯ್, ಬಿಜೆಪಿ ಅಥವಾ ಆರ್ ಎಸ್ ಎಸ್ ಗೆ ಸೇರ್ಪಡೆಯಾದರೆ ಜಾಮೀನು ನೀಡುವುದಾಗಿ ಎನ್ ಐಎ ವಿಚಾರಣಾಧಿಕಾರಿಗಳಿಂದ ಆಮಿಷವೊಡ್ಡಲಾಗಿತ್ತು ಎಂದು ತಿಳಿಸಿದ್ದಾರೆ.
ಗೊಗೋಯ್ ಅವರ ಹೊಸ ರಾಜಕೀಯ ಪಕ್ಷ ರೈಜೋರ್ ದಳ ಪತ್ರವನ್ನು ಬಿಡುಗಡೆ ಮಾಡಿದ್ದು, ಕೋರ್ಟ್ ಅನುಮತಿ ಇಲ್ಲದೆ ಡಿಸೆಂಬರ್ 18, 2019ರಂದು ದೆಹಲಿಗೆ ಕರೆದೊಯ್ಯಲಾಯಿತು ಎಂದು ಹೇಳಿದೆ.
ಎನ್ ಐಎ ಕೇಂದ್ರ ಕಚೇರಿಯಲ್ಲಿ ಲಾಕ್ ಅಪ್ ನಲ್ಲಿ ಕೊಳಕಾದ ಬ್ಲಾಂಕೆಟ್ ವೊಂದನ್ನು ನೀಡಲಾಗಿತ್ತು. ನೆಲದ ಮೇಲೆ 3 ರಿಂದ 4 ಡಿಗ್ರಿ ಸೆಲ್ಸಿಯಸ್ ನಲ್ಲಿಯೇ ಮಲಗಬೇಕಾಗಿತ್ತು. ಆರ್ ಎಸ್ ಎಸ್ ಗೆ ಸೇರ್ಪಡೆಯಾದರೆ ಜಾಮೀನು ದೊರಕಿಸುವುದಾಗಿ ವಿಚಾರಣೆ ವೇಳೆ ಎನ್ ಐಎ ಅಧಿಕಾರಿಗಳು ಆಮಿಷವೊಡಿದ್ದರು. ಬಿಜೆಪಿಗೆ ಸೇರ್ಪಡೆಯಾದರೆ ತೆರವಾಗುವ ಕ್ಷೇತ್ರದಿಂದ ಗೆಲ್ಲಿಸಿ ಸಚಿವರನ್ನಾಗಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು ಎಂದು ಗೊಗೋಯ್ ಪತ್ರದಲ್ಲಿ ತಿಳಿಸಿದ್ದಾರೆ.
ಕೃಷಿಕ್ ಮುಕ್ತಿ ಸಂಗ್ರಮ್ ಸಮಿತಿಯಿಂದ ಹೊರಬಂದು ಎನ್ ಜಿಒ ವೊಂದನ್ನು ಆರಂಭಿಸಲು 20 ಕೋಟಿ ಹಣ ನೀಡುವ ಆಮಿಷವೊಡ್ಡಲಾಗಿತ್ತು. ಅಲ್ಲದೇ, ಅಸ್ಸಾಂ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಅವರ ಪ್ರಸ್ತಾಪನ್ನು ತಿರಸ್ಕರಿಸಿದ ನಂತರ ಅಸ್ಸಾಂನ ಮುಖ್ಯಮಂತ್ರಿ ಹಾಗೂ ಪ್ರಭಾವಿ ಸಚಿವರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರು. ಅದನ್ನು ಕೂಡಾ ತಿರಸ್ಕರಿಸಿದ್ದಾಗಿ ಆರ್ ಟಿಐ ಹೋರಾಟಗಾರ ಹೇಳಿದ್ದಾರೆ.
ಎನ್ ಐಎ ಅಧಿಕಾರಿಗಳು ನೀಡಿದ ಎಲ್ಲಾ ಆಮಿಷಗಳನ್ನು ನಿರಾಕರಿಸಿದ ನಂತರ ಜೀವ ಬೆದರಿಕೆ ಹಾಕಲಾಯಿತು. 10 ವರ್ಷಗಳ ಜೈಲುಶಿಕ್ಷೆಯ ಬೆದರಿಕೆ ಹಾಕಲಾಗಿದೆ. ತೀವ್ರತರವಾದ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದ್ದು, 2020 ಡಿಸೆಂಬರ್ ನಿಂದಲೂ ನೆಮ್ಮದಿ ಇಲ್ಲದಂತಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಮತ್ತಿತರ ಅನಾರೋಗ್ಯ ಸಮಸ್ಯೆಯಿಂದಾಗಿ ಅವರನ್ನು ಗುವಾಹಟಿಯ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಿಎಎ ವಿರೋಧಿ ಹೋರಾಟದಲ್ಲಿ ಹಿಂಸಾಚಾರ ಆರೋಪದ ಮೇರೆಗೆ ಡಿಸೆಂಬರ್ 2019ರಂದು ಎನ್ ಐಎ ಅಖಿಲ್ ಗೊಗೋಯ್ ಅವರನ್ನು ಬಂಧಿಸಿತ್ತು.