ಸೇಲಂ: ತಮಿಳು ನಾಡಿನಲ್ಲಿ ತಮ್ಮ ಪಕ್ಷ ಮೈತ್ರಿ ಮಾಡಿಕೊಂಡಿರುವಂತೆ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಿ ಎಂದು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ರಾಹುಲ್ ಗಾಂಧಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತಮಿಳು ನಾಡಿನ ಮೇಲೆ ಸಾಂಸ್ಕೃತಿಕ ಮತ್ತು ರಾಸಾಯನಿಕ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 6ರಂದು ತಮಿಳು ನಾಡಿನಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, ಇದಕ್ಕೂ ಮುನ್ನ ಸಾರ್ವಜನಿಕ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಮುವಾದಿ ಫ್ಯಾಸಿಸ್ಟ್ ಧೋರಣೆಯ ಸರ್ಕಾರದ ಆಡಳಿತದಿಂದ ದೇಶದ ಜನತೆ ಪರಿಸ್ಥಿತಿ ಉಸಿರುಗಟ್ಟಿ ಹೋಗುವಂತಾಗಿದೆ. ಇದರ ವಿರುದ್ಧ ಜನರನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ರಾಹುಲ್ ಗಾಂಧಿಯವರಿಗಿದೆ ಎಂದಿದ್ದಾರೆ.
ತಮಿಳು ನಾಡಿನಲ್ಲಿರುವಂತೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಮೈತ್ರಿ ಪಕ್ಷವಿಲ್ಲ, ಹೀಗಾಗಿ ರಾಹುಲ್ ಗಾಂಧಿಯವರು ಇಂತಹ ಮೈತ್ರಿ ರಚಿಸುವತ್ತ ಗಮನ ಹರಿಸಬೇಕು ಎಂದರು. ರಾಹುಲ್ ಗಾಂಧಿಯವರನ್ನು ಸೋದರ ಎಂದು ಸಂಬೋಧಿಸಿರುವ ರಾಹುಲ್ ಗಾಂಧಿ, ತಮ್ಮನ್ನು ಸರ್ ಎಂದು ಬೋಧಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದರು.
ಈ ಬಾರಿಯ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಡಿಎಂಕೆ ಪಟ್ಟಳಿ ಮಕ್ಕಳ್ ಕಚ್ಚಿ ಮತ್ತು ಬಿಜೆಪಿ, ಕೇಂದ್ರದ ಮಾಜಿ ಸಚಿವರಾದ ಜಿ ಕೆ ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್ ಮತ್ತು ಇತರ ಸಣ್ಣಪುಟ್ಟ ಪಕ್ಷಗಳೊಂದಿಗೆ ಎದುರಿಸುತ್ತಿದೆ.
ಕಳೆದ ಬಾರಿ 2019ರಲ್ಲಿ ತಮಿಳು ನಾಡಿನಿಂದ ಯಾವ ಲೋಕಸಭಾ ಸ್ಥಾನವನ್ನು ಕೂಡ ಬಿಜೆಪಿ ಗೆದ್ದಿಲ್ಲ. ಡಿಎಂಕೆ ಮತ್ತು ಅದರ ಮೈತ್ರಿಯ ಜಾತ್ಯತೀತ ಪಕ್ಷಗಳು ಒಂದಾಗಿದ್ದವು.
ಚೆನ್ನೈನ ಮರೀನಾ ಸಮುದ್ರ ತೀರದಲ್ಲಿ ತಮ್ಮ ತಂದೆ ಡಿಎಂಕೆ ಸ್ಥಾಪಕ ಎಂ ಕರುಣಾನಿಧಿ ಅವರ ಸಮಾಧಿಯನ್ನು ನಿರ್ಮಿಸಲು ಕೇಂದ್ರವು ಯಾವುದೇ ಬೆಂಬಲ ನೀಡಿಲ್ಲ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಇಬ್ಬರೂ ಜನರ ಬಗ್ಗೆ 'ಕಾಳಜಿ' ಹೊಂದಿಲ್ಲ, ಭ್ರಷ್ಟಾಚಾರದ ಮೂಲಕ ಹಣ ಸಂಪಾದಿಸುವುದನ್ನು ಮಾತ್ರ ನೋಡುತ್ತಿದ್ದಾರೆ, ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಅಧೀನರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 2019 ರ ಲೋಕಸಭಾ ಚುನಾವಣೆಯಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಒಟ್ಟಾಗಿ ಶೇಕಡಾ 69 ಮತಗಳನ್ನು ಪಡೆದಿವೆ, ಇದರಲ್ಲಿ ಬಿಜೆಪಿಯ ಶೇಕಡಾ 37.76, ಕಾಂಗ್ರೆಸ್ ಪಕ್ಷದ 19.7 ಶೇಕಡಾ, ಸಿಪಿಐನ 0.59 ಮತ್ತು ಸಿಪಿಐ (ಎಂ) ಶೇ 1.77 ರಷ್ಟು ಮತಗಳನ್ನು ಒಳಗೊಂಡಿದೆ.
Advertisement