ನವದೆಹಲಿ: ಭಾರತದಲ್ಲಿ ಉಂಟಾಗಿರುವ ಕೋವಿಡ್-19 ಸೋಂಕಿನಿಂದಾಗಿ ಇಡೀ ಜಗತ್ತೇ ನಡುಗಿ ಹೋಗಿದೆ. ಚಿತಾಗಾರಗಳ ಮುಂದೆಯೂ ಜನ ಸರತಿ ಸಾಲಲ್ಲಿ ನಿಲ್ಲುವಂತೆ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಶನಿವಾರ ಭಾರತದಲ್ಲಿ ವಿಶ್ವದಾಖಲೆಯ 4 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ಇಡೀ ಜಗತ್ತೇ ನಡುಗೆ ಹೋಗಿದೆ. ದಾಖಲೆ ಪ್ರಮಾಣದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಆದರೆ ಪರಿಣಾಕಾರಿ ನಿರ್ಧಾರ ಕೈಗೊಳ್ಳಬೇಕಾದ ಪ್ರಧಾನಿ ನರೇಂದ್ರ ಮೋದಿ ಮಾತ್ರ ಚೆಂಡನ್ನು ರಾಜ್ಯ ಸರ್ಕಾರಗಳತ್ತ ಎಸೆದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೋವಿಡ್-19ನಿಂದ ಗೆದ್ದೆವು ಎಂದು ಕ್ರೆಡಿಟ್ ತೆಗೆದುಕೊಂಡಿದ್ದ ಮೋದಿ ಸರ್ಕಾರ ಇದೀಗ ಸೋಂಕು ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡುತ್ತಿದೆ.
ಆದರೆ ಮೋದಿ ಸರ್ಕಾರ ಈ ಮೂರ್ಖತನದಲ್ಲಿರುವಾಗಲೇ ದೇಶದಲ್ಲಿ 2ನೇ ಅಲೆ ಆರಂಭವಾಗಿತ್ತು ಎಂಬ ಸಣ್ಣ ಪರಿಜ್ಞಾನ ಕೂಡ ಸರ್ಕಾರಕ್ಕೆ ಇರಲಿಲ್ಲ. ಆ ಮೂರ್ಖತನದ ಫಲವನ್ನೇ ದೇಶ ಉಣ್ಣುತ್ತಿದೆ. ನಿಮ್ಮ ಜಾಗರೂಕತೆಯಲ್ಲಿ ನೀವಿರಿ.. ಯಾರೂ ಕೂಡ ನಿಮ್ಮ ನೆರವಿಗೆ ಬರುವುದಿಲ್ಲ. ಖಂಡಿತ ಪ್ರಧಾನಿ ನರೇಂದ್ರ ಮೋದಿ ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಅಕ್ಷರಶಃ ಮೋದಿ ಸರ್ಕಾರದ ಕೈ ಮೀರಿದ್ದು, ಇದು ರಾಜ್ಯಗಳನ್ನು ಮತ್ತು ದೇಶದ ನಾಗರಿಕರನ್ನು 'ಆತ್ಮನಿರ್ಭರ' ಮಾಡುವ ವಿಧಾನವೇ ಎಂದು ಆಶ್ಚರ್ಯವಾಗುತ್ತಿದೆ. ವಿಜ್ಞಾನಿಗಳು ಸೇರಿದಂತೆ ಆರೋಗ್ಯ ತಜ್ಞರು ಪದೇ ಪದೇ ಎಚ್ಚರಿಕೆಗಳ ನೀಡುತ್ತಿದ್ದರೂ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅದನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ತಜ್ಞರ ಮತ್ತು ನುರಿತ ವೈದ್ಯರ ಎಚ್ಚರಿಕೆಗಳನ್ನೂ ನಿರ್ಲಕ್ಷಿಸಿ ಇಂದು ಜಗತ್ತಿನ ಅತ್ಯಂತ ಕೋವಿಡ್-19 ಹೀನಾಯ ಪರಿಸ್ಥಿತಿಯಲ್ಲಿ ಏಕೈಕ ದೇಶ ಭಾರತವಿರಬೇಕು. ಇಂದು ಕೋವಿಡ್-19 ಸೋಂಕಿತರು ಚಿಕಿತ್ಸೆ ಮಾತ್ರ ಆಸ್ಪತ್ರೆ ಮುಂದೆ ಸರತಿ ಸಾಲಲ್ಲಿ ನಿಂತಿಲ್ಲ.. ಬದಲಿಗೆ ಆಕ್ಸಿಜನ್ ಪಡೆಯಲು ಮತ್ತು ಸ್ಮಶಾಣಗಳ ಮುಂದೆಯೂ ಸರತಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಇದಕ್ಕಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಅಂತೆಯೇ ಕೋವಿಡ್ ಸಾಂಕ್ರಾಮಿಕ ಸೋಂಕು ತಡೆಯು ಸೂಕ್ತ ಯೋಜನೆ ರೂಪಿಸಬೇಕು. ಅಗತ್ಯಗಳನ್ನು ಪೂರೈಸುವುದು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
Advertisement