ಹೈದರಾಬಾದ್: ನಗರದ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯ ಹೆಚ್ಚುವರಿ ಇನ್ಸ್ ಪೆಕ್ಟರ್ ಎಸ್ ಲಕ್ಷ್ಮಣ (39) ಮತ್ತು ಅವರ ಪತ್ನಿ ಜಾನ್ಸಿ (34) ಶನಿವಾರ ನಸುಕಿನ ಜಾವ ಅಬ್ದುಲ್ಲಾಪುರ್ಮೆಟ್ ನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ದಂಪತಿಯ ಪುತ್ರ ಕುಶಲವ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದಂಪತಿ ಚಲಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಕುಟುಂಬದ ಕಾರ್ಯಕ್ರಮವೊಂದಕ್ಕೆ ದಂಪತಿ ಸೂರ್ಯಪೇಟೆ ಜಿಲ್ಲೆಯ ತಮ್ಮ ಊರಿಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೈದರಾಬಾದಿಗೆ ವಾಪಸ್ಸಾಗುತ್ತಿರುವಾಗ ಅಪಘಾತ ನಡೆದಿದೆ, ಇನ್ಸ್ ಪೆಕ್ಟರ್ ಪತ್ನಿ ಜಾನ್ಸಿ ಕಾರು ಚಲಾಯಿಸುತ್ತಿದ್ದರು.
ವಿಜಯವಾಡ-ಹೈದರಾಬಾದ್ ಹೆದ್ದಾರಿಯಲ್ಲಿ ಬರುತ್ತಿರುವಾಗ ಅಬ್ದುಲ್ಲಪುರ್ಮೆಟ್ ಗೆ ತಲುಪಿದಾಗ ಜಾನ್ಸಿಯವರು ವಾಹನದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿ ನಿಂತಿದ್ದ ಲಾರಿಗೆ ಹೋಗಿ ಡಿಕ್ಕಿ ಹೊಡೆಯಿತು.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಲಾರಿಯ ಕೆಳಗೆ ಹೋಗಿ ಅದರ ಎದುರು ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಯಿತು. ಜಾನ್ಸಿ ಮತ್ತು ಲಕ್ಷ್ಮಣ್ ಸ್ಥಳದಲ್ಲಿಯೇ ಮೃತಪಟ್ಟರೆ 7 ವರ್ಷದ ಅವರ ಮಗ ಕುಶಲವ್ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
Advertisement