ಮುಂಬೈ: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ಮಹಾರಾಷ್ಟ್ರ ಸಚಿವ ಜಯಂತ್ ಪಾಟೀಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಚುನಾವಣೆಗೂ ಮೊದಲು ಏರಿಕೆಯಾಗದ ತೈಲೋತ್ಪನ್ನಗಳ ದರಗಳು ಚುನಾವಣೆ ಬಳಿಕ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಯಂತ್ ಪಾಟೀಲ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದ್ಯಾವ ಆರ್ಥಿಕ ಯೋಜನೆ ರೂಪಿಸುತ್ತಾದ್ದಾರೆಯೋ ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ. 'ಕೇಂದ್ರ ಹಣಕಾಸು ಸಚಿವಾಲಯವು ಬೇರೆ ವರ್ಗದ ಹಣಕಾಸು ಯೋಜನೆಗಳನ್ನು ರೂಪಿಸುತ್ತಿದೆ. ಮತದಾನ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗದಂತೆ ನಿಯಂತ್ರಿಸಲಾಗಿತ್ತು. ಆದರೆ ಚುನಾವಣೆ ಮುಗಿದ ನಂತರ ಬೆಲೆ ಏರಿಕೆ ನಿರಂತರವಾಗಿದೆ ಎಂದು #PetrolDieselPriceHike ಎಂಬ ಹ್ಯಾಶ್ಟ್ಯಾಗ್ ಬಳಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಆದರೆ ಪಾಟೀಲ್ ತಮ್ಮ ಟ್ವೀಟ್ನಲ್ಲಿ ಯಾವುದೇ ನಿರ್ದಿಷ್ಟ ಚುನಾವಣೆಯನ್ನು ಉಲ್ಲೇಖಿಸಿಲ್ಲ. ಆದರೆ ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಇಂಧನ ಬೆಲೆಗಳನ್ನು ಕಡಿತಗೊಳಿಸಲಾಗಿತ್ತು. ಅಂತೆಯೇ ಕಳೆದ ಎರಡು ತಿಂಗಳ ಅವಧಿಯಲ್ಲಿ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು.
ಇಂದು ಕೂಡ ತೈಲೋತ್ಪನ್ನಗಳ ದರ ಏರಿಕೆ
ಇನ್ನು ದೇಶದಲ್ಲಿ ನಿರಂತರವಾಗಿ ಕಳೆದ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಇಂದೂ ಸಹ ಪೆಟ್ರೋಲ್ ಬೆಲೆ ಲೀಟರ್ ಗೆ 25 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ 27 ಪೈಸೆ ಏರಿಕೆಯಾಗಿದೆ.
Advertisement