ಕೋವಿಡ್-19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ: ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೊರೋನಾದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ ಎಂದು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿದ್ದಾರೆ.
ಕೊರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ಕೊರೋನಾದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 5 ಸಾವಿರ ರೂ ಪಿಂಚಣಿ ನೀಡಲಾಗುತ್ತದೆ. ಅಲ್ಲದೆ ಇಂತಹ ಮಕ್ಕಳಿಗೆ ಸರ್ಕಾರವೇ ಉಚಿತ ಶಿಕ್ಷಣ ಮತ್ತು ಉಚಿತ ರೇಷನ್ ನೀಡಲಿದೆ. ಅಂತೆಯೇ ಗಂಡ ಕೋವಿಡ್ ನಿಂದ ಸಾವನ್ನಪ್ಪಿ ಅವರ ಪತ್ನಿ ವ್ಯವಹಾರ ಮಾಡಲು ಬಯಸಿದರೆ, ಸರ್ಕಾರದ ಖಾತರಿಯ ಮೇಲೆ ಬಡ್ಡಿ ಇಲ್ಲದೆ ಸಾಲವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಿದರೆ ಕಠಿಣ ಕ್ರಮ
ಇದೇ ವೇಳೆ ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಶಿವರಾಜ್ ಸಿಂಗ್ ಎಚ್ಚರಿಕೆ ನೀಡಿದರು. ಅಂತೆಯೇ ನಕಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ವ್ಯಾಪಾರ ಮಾಡುವವರ ವಿರುದ್ಧ ಕೊಲೆ ಪ್ರಕರಣ ಹೂಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.