ಧುಬ್ರಿ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರು ಶುಕ್ರವಾರ ಅಸ್ಸಾಂನ ರಾನ್ಪಾಗ್ಲಿಯಲ್ಲಿರುವ ಶಿಬಿರಕ್ಕೆ ಭೇಟಿ ನೀಡಿದ್ದು, ಬಿಜೆಪಿ ಬೆಂಬಲಿಗರೆಂದು ಹೇಳಿಕೊಳ್ಳುವ ಹಲವಾರು ಕುಟುಂಬಗಳು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಲ್ಲಿ ಆಶ್ರಯ ಪಡೆದಿದ್ದಾರೆ.
ಉತ್ತರ ಬಂಗಾಳದ ಕೂಚ್ ಬೆಹಾರ್ನ ಬಿಜೆಪಿ ಸಂಸದ ನಿಸಿತ್ ಪ್ರಮಣಿಕ್ ಅವರೊಂದಿಗೆ ಧಂಕರ್ ಅವರು ಇಂದು ಅಸ್ಸಾಂನ ಧುಬ್ರಿ ಜಿಲ್ಲೆಯ ಶಿಬಿರಕ್ಕೆ ತೆರಳಿ, ಅಲ್ಲಿ ಆಶ್ರಯ ಪಡೆದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ಜನರೊಂದಿಗೆ ಮಾತುಕತೆ ನಡೆಸಿದರು.
ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ತಮ್ಮ ಮನೆಗಳನ್ನು ಬಿಟ್ಟು ಬಂದಿರುವುದಾಗಿ ಶಿಬಿರದಲ್ಲಿರುವ ಬಂಗಾಳ ಜನ ಹೇಳಿಕೊಂಡಿದ್ದಾರೆ.
ನಮ್ಮ ಮನೆಗಳನ್ನು "ತೃಣಮೂಲ ಕಾಂಗ್ರೆಸ್ ಗೂಂಡಾಗಳು ದರೋಡೆ ಮಾಡಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಹೊರಡಲು ಸಾಧ್ಯವಾಗದ ಕಾರಣ ಪಶ್ಚಿಮ ಬಂಗಾಳ ರಾಜ್ಯಪಾಲರು ಕೂಚ್ ಬೆಹಾರ್ನಿಂದ ರಸ್ತೆ ಮೂಲಕ ರಾನ್ಪಾಗ್ಲಿಯಲ್ಲಿರುವ ಶಿಬಿರಕ್ಕೆ ಪ್ರಯಾಣ ಬೆಳೆಸಿದರು.
ಧಂಕರ್ ಅವರು ನಿನ್ನೆ ಕೂಚ್ ಬೆಹಾರ್ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಚುನಾವಣೋತ್ತರ ಹಿಂಸಾಚಾರಕ್ಕೆ ಒಳಗಾದ ಜನರನ್ನು ಭೇಟಿ ಚರ್ಚಿಸಿದರು. ಈ ವೇಳೆ ಸಿಟಾಲ್ಕುಚಿಯಲ್ಲಿ ರಾಜ್ಯಪಾಲರಿಗೆ ಕಪ್ಪು ಧ್ವಜ ತೋರಿಸಲಾಯಿತು, ಅಲ್ಲಿ ಚುನಾವಣೆಯ ಸಮಯದಲ್ಲಿ ಕೇಂದ್ರ ಪಡೆಗಳ ಗುಂಡಿನ ದಾಳಿಯಲ್ಲಿ ನಾಲ್ಕು ಗ್ರಾಮಸ್ಥರು ಸಾವನ್ನಪ್ಪಿದರು. ಹೀಗಾಗಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಲಾಯಿತು.
Advertisement