ನವದೆಹಲಿ: ದೇಶದಲ್ಲಿ ಕೋವಿಡ್-19 ನಿಂದ ಸಾವುಗಳು ಹೆಚ್ಚಾಗುತ್ತಿದ್ದರೆ, ಲಸಿಕೆಗಳು ಕಡಿಮೆಯಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಜನರ ಗಮನ ಬೇರೆಡೆಗೆ ತಿರುಗಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಕೋವಿಡ್ ವ್ಯಾಕ್ಸಿನೇಷನ್ಗಳ ಕೊರತೆ ಮತ್ತು ಕೊರೋನಾ ವೈರಸ್ನಿಂದಾಗಿ ದೈನಂದಿನ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳವನ್ನು ತೋರಿಸುವ ಗ್ರಾಫ್ಗಳನ್ನು ಸಹ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
ಲಸಿಕೆಗಳು ಕಡಿಮೆಯಾಗುತ್ತಿವೆ ಮತ್ತು ಕೋವಿಡ್ ಸಾವುಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರದ ನೀತಿ - ಗಮನವನ್ನು ಬೇರೆಡೆಗೆ ತಿರುಗಿಸಿ, ಸುಳ್ಳು ಹರಡಿ, ಸತ್ಯವನ್ನು ಮರೆಮಾಚುತ್ತಿದೆ" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಒಂದೇ ದಿನದಲ್ಲಿ ಕೊರೋನಾ ವೈರಸ್ನಿಂದಾಗಿ ದೇಶದಲ್ಲಿ 4,529 ಸಾವುಗಳು ವರದಿಯಾಗಿವೆ, ಇದರೊಂದಿಗೆ ಕೊರೋನಾ ಸಾವಿನ ಸಂಖ್ಯೆ 2,83,248 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 2.67 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಮಂಗಳವಾರ 2,67,334 ಹೊಸ ಪಾಸಿಟಿವ್ ಪ್ರಕರಣಗಳೊಂದಿಗೆ, ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 2,54,96,330 ಕ್ಕೆ ಏರಿದೆ.
Advertisement