ಕೊಲ್ಕತ್ತಾ: ನಾರದಾ ಕುಟುಕು ಕಾರ್ಯಾಚಾರಣೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಟಿಎಂಸಿ ಮುಖಂಡರಿಗೆ ಜಾಮೀನು ನೀಡಿರುವುದರ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅನೀವಾರ್ಯ ಸಂದರ್ಭದ ಕಾರಣದಿಂದ ಕೊಲ್ಕತ್ತಾ ಹೈಕೋರ್ಟ್ ಗುರುವಾರ ಮುಂದೂಡಿದೆ.
ಹಂಗಾಮಿ ಮುಖ್ಯ ನ್ಯಾಯಾಧೀಶ ರಾಜೇಶ್ ಬಿಂದಾಲ್ ಮತ್ತು ನ್ಯಾಯಾಧೀಶ ಅರಿಜೀತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠ. ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿದೆ. ಸಿಬಿಐ ಸಲ್ಲಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮೊಲೊಯ್ ಘಟಕ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅನೀವಾರ್ಯ ಸಂದರ್ಭದ ಕಾರಣದಿಂದಾಗಿ ಮೊದಲ ವಿಭಾಗೀಯ ಪೀಠ ಇಂದು ಸೇರಲು ಆಗುತ್ತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್
ವೆಬ್ ಸೈಟ್ ನೋಟಿಸ್ ಒಂದರಲ್ಲಿ ಹೇಳಲಾಗಿದೆ.
ಈ ಹಿಂದೆ ಸಿಬಿಐಯಿಂದ ಬಂಧಿಸಲಾಗಿದ್ದ ಪಶ್ಚಿಮ ಬಂಗಾಳ ಸಚಿವರಾದ ಸುಬ್ರಾತ್ ಮುಖರ್ಜಿ ಮತ್ತು ಫಿರ್ಹಾದ್ ಹಕೀಂ ಮತ್ತು ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಕೊಲ್ಕತ್ತಾದ ಮಾಜಿ ಮೇಯರ್ ಸೊವಾನ್ ಟಜರ್ಜಿ ಅವರಿಗೆ ಜಾಮೀನು ನೀಡಿದ್ದ ಸಿಬಿಐ ಕೋರ್ಟ್ ಆದೇಶಕ್ಕೆ ಸೋಮವಾರ ರಾತ್ರಿ ನ್ಯಾಯಾಲಯ ತಡೆ ನೀಡಿತ್ತು.
ವಿಶೇಷ ನ್ಯಾಯಾಲಯ ನೀಡಿರುವ ಆದೇಶಕ್ಕೆ ತಡೆ ನೀಡುವುದು ಸೂಕ್ತ ಎಂದು ಹೇಳಿದ್ದ ವಿಭಾಗೀಯ ಪೀಠ, ಮುಂದಿನ ಆದೇಶದವರೆಗೂ ಆರೋಪಿತ ವ್ಯಕ್ತಿಗಳಿಗೆ ನ್ಯಾಯಾಂಗ ಬಂಧನದಲ್ಲಿ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಿ ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು.
ನಾರದಾ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಮೇರೆಗೆ ವಿಚಾರಣೆ ನಡೆಸುತ್ತಿರುವ ಸಿಬಿಐ ಸೋಮವಾರ ನಾಲ್ವರು ಟಿಎಂಸಿ ಮುಖಂಡರನ್ನು ಬಂಧಿಸಿತ್ತು.
Advertisement