ಉತ್ತರ ಪ್ರದೇಶ: ಕೊರೋನಾ ಕರ್ಫ್ಯೂ ಉಲ್ಲಂಘಿಸಿದ ಬಾಲಕನಿಗೆ ಪೊಲೀಸ್ ಥಳಿತ; ಬಾಲಕ ನಿಧನ; ಪೇದೆ ಅಮಾನತು

ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ 17 ವರ್ಷದ ಬಾಲಕ ಪೊಲೀಸರ ಥಳಿತದ ನಂತರ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಭಟ್ಪುರಿ ಜಿಲ್ಲೆಯಲ್ಲಿ ನಡೆದಿದೆ. 
ಅಮಾನತು (ಸಾಂಕೇತಿಕ ಚಿತ್ರ)
ಅಮಾನತು (ಸಾಂಕೇತಿಕ ಚಿತ್ರ)

ಲಖನೌ: ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ 17 ವರ್ಷದ ಬಾಲಕ ಪೊಲೀಸರ ಥಳಿತದ ನಂತರ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಭಟ್ಪುರಿ ಜಿಲ್ಲೆಯಲ್ಲಿ ನಡೆದಿದೆ. 

ಬಾಲಕನ ಕುಟುಂಬ ಸದಸ್ಯರು ಪೊಲೀಸರ ಥಳಿತದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಿದ್ದು, ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಹೋಮ್ ಗಾರ್ಡ್ ನ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬಾಲಕ ಮನೆಯ ಹೊರಭಾಗದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾಗ ಆತನನ್ನು ಪೊಲೀಸರು ಥಳಿಸಿದ್ದಾರೆ. 

ಪೊಲೀಸರು ಈ ಬಗ್ಗೆ ಹೇಳಿಕೆಯನ್ನು ಪಡೆದಿದ್ದು, ಆರೋಪ ಎದುರಿಸುತ್ತಿರುವ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ ಹಾಗೂ ತನಿಖೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. 

ಕೊರೋನಾ ಕರ್ಫ್ಯೂ ಉಲ್ಲಂಘನೆ ಮಾಡಿದ್ದಾನೆಂದು ಪೊಲೀಸ್ ಸಿಬ್ಬಂದಿಗಳು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೊಣ್ಣೆಯಿಂದ ಹೊಡೆದಿದ್ದರು ಎಂದು ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. 

ಥಳಿತದಿಂದ ತೀವ್ರವಾಗಿ ಅಸ್ವಸ್ಥಗೊಂಡ ಬಾಲಕನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆ ವೇಳೆಗೆ ಆ ಬಾಲಕ ಮೃತಪಟ್ಟಿದ್ದಾಗಿ ವೈದ್ಯಕೀಯ ಸಿಬ್ಬಂದಿ ಘೋಷಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. 
 
ಆಕ್ರೋಶಗೊಂಡ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಬಾಲಕನ ಕುಟುಂಬ ಸದಸ್ಯರಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದ್ದರು. ಉತ್ತರ ಪ್ರದೇಶ ಸರ್ಕಾರ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮೇ.24 ರ ಬೆಳಿಗ್ಗೆ 7 ವರೆಗೂ ಕೊರೋನಾ ಕರ್ಫ್ಯೂವನ್ನು ವಿಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com