ನವದೆಹಲಿ: ದೆಹಲಿಯಲ್ಲಿ ಲಾಕ್ ಡೌನ್ ಅನ್ನು ಮೇ 31ರವರೆಗೂ ವಿಸ್ತರಿಸಲಾಗಿದ್ದು, ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಮತ್ತಷ್ಟು ಕುಸಿತವಾದರೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಜ್ರಿವಾಲ್ ಅವರು, ಮೇ 31ರ ಮುಂಜಾನೆ 5 ಗಂಟೆಯವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗುತ್ತಿದೆ. ಒಂದು ವೇಳೆ ದೆಹಲಿಯಲ್ಲಿ ಇದೇ ರೀತಿ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಕುಸಿತವಾಗುತ್ತಿದ್ದರೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
'ಒಂದು ವೇಳೆ ದೇಶದ ಎಲ್ಲ ನಾಗರೀಕರು ಲಸಿಕೆ ಪಡೆದುಕೊಂಡರೆ ಮೂರನೇ ಅಲೆಯನ್ನು ತಡೆಯಬಹುದು. ಹೀಗಾಗಿ ನಾವು ಲಸಿಕಾ ಕಾರ್ಯಕ್ರಮವನ್ನು ತ್ವರಿತಗೊಳಿಸಲು ಯೋಜಿಸುತ್ತಿದ್ದೇವೆ. ಆದಷ್ಟು ಬೇಗ ದೆಹಲಿಯ ಪ್ರತೀಯೊಬ್ಬ ನಾಗರೀಕನಿಗೂ ಕೋವಿಡ್ ಲಸಿಕೆ ಹಾಕಲಾಗುತ್ತದೆ. ಈ ಸಂಬಂಧ ಸ್ಥಳೀಯ ಮತ್ತು ವಿದೇಶಿ ಲಸಿಕಾ ತಯಾರಕಾ ಸಂಸ್ಥೆಗಳೊಂದಿಗೆ ಲಸಿಕೆ ಖರೀದಿ ಕುರಿತು ಚರ್ಚೆ ನಡೆಸಲಾಗುತ್ತಿದೆ. ಲಸಿಕೆಗಾಗಿ ನಮ್ಮ ಬಜೆಟ್ ಹಣವನ್ನು ವ್ಯಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.
ಇನ್ನು ದೆಹಲಿಯಲ್ಲಿ ಕೊರೋನಾ ಸೋಂಕಿನ ಅಬ್ಬರ ಗಣನೀಯವಾಗಿ ತಗ್ಗಿದ್ದು, ಸೋಂಕು ಸಕಾರಾತ್ಮಕ ಪ್ರಮಾಣ ಶೇ.2.5ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1600 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ.
Advertisement