ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ನಡೆದ ಹಿಂಸಾಚಾರದ ಕುರಿತು ವಿವರ ನೀಡುವಂತೆ ಅಲ್ಲಿನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಪಶ್ಚಿಮ ಬಂಗಾಳ ಚುನಾವಣೆ ನಂತರ ನಡೆದ ಹಿಂಸಾಚಾರ ಹಲವು ಜನರ ವಲಸೆ ಹಾಗೂ ಆಂತರಿಕ ಸ್ಥಳಾಂತರಕ್ಕೆ ಕಾರಣವಾಗಿದೆ. ಅವರ ಜೀವನ ಸಂಕಷ್ಟದಲ್ಲಿದ್ದು, ಅಂತಹವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲೆ ಶ್ರುತಿ ಅಗರ್ವಾಲ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿ.ಆರ್. ಗವಾಯಿ ಅವರ ರಜಾಕಾಲದ ಪೀಠವು ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಿತು. ಜೊತೆಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಗಳಿಗೆ ಪ್ರತಿವಾದಿಯಾಗಿ ಸೇರ್ಪಡಲು ಅವಕಾಶ ಕಲ್ಪಿಸಿತು.
ರಾಜ್ಯ ಸರ್ಕಾರದ ಉದಾಸೀನತೆಯಿಂದಾಗಿ, ಹದಿನೆಂಟು ಕ್ಕೂ ಹೆಚ್ಚು ರಾಜಕೀಯ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ಖಾಸಗಿ ಮತ್ತು ಆಸ್ತಿ ಲೂಟಿ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಪೊಲೀಸರು ಮತ್ತು ರಾಜ್ಯ ಪ್ರಾಯೋಜಿತ ಗೂಂಡಾಗಳು" ಇದರಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಈಕುರಿತು ತನಿಖೆ ನಡೆಸುತ್ತಿಲ್ಲ ಮತ್ತು ಅವರ ಜೀವಕ್ಕೆ ಬೆದರಿಕೆ ಎದುರಿಸುತ್ತಿರುವವರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.
Advertisement