ಗೌತಮ್ ಗಂಭೀರ್ ಗೆ ಅಷ್ಟೊಂದು ಫ್ಯಾಬಿಫ್ಲೂ ಔಷಧ ಹೇಗೆ ಸಿಕ್ತು: ಔಷಧ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್

ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲಾಗುವ ಫ್ಯಾಬಿಫ್ಲೂ ಔಷಧವನ್ನು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣದಲ್ಲಿ ಔಷಧ ನಿಯಂತ್ರಕವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ನವದೆಹಲಿ: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲಾಗುವ ಫ್ಯಾಬಿಫ್ಲೂ ಔಷಧವನ್ನು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣದಲ್ಲಿ ಔಷಧ ನಿಯಂತ್ರಕವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 

ಪರಿಸ್ಥಿತಿಯ ಲಾಭ ಪಡೆದು ರಕ್ಷಕರೆಂಬಂತೆ ತೋರಿಸಿಕೊಳ್ಳುವ ಜನರ ಮನಸ್ಥಿತಿಯನ್ನು ಖಂಡಿಸಬೇಕಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. 

ಗೌತಮ್ ಗಂಭೀರ್ ಗೆ ಹೇಗೆ ಅಷ್ಟು ಪ್ರಮಾಣದ ಫಾಬಿಫ್ಲೂ ಔಷಧ ಸಿಗುವುದಕ್ಕೆ ಸಾಧ್ಯವಾಯಿತು ಎಂಬುದನ್ನು ಸರಿಯಾಗಿ ಪರಿಶೀಲನೆ ನಡೆಸದ ಡ್ರಗ್ ಕಂಟ್ರ‍ೋಲರ್ ಬಗ್ಗೆ ಅಸಮಾಧಾನ ಹೊರಹಾಕಿರುವ ಕೋರ್ಟ್, ಔಷಧ ನಿಯಂತ್ರಕದ ಮೇಲಿದ್ದ ತನ್ನ ವಿಶ್ವಾಸ ಅಲುಗಾಡಿದೆ ಎಂದು ಹೇಳಿದೆ. 

ಈ ಔಷಧದ ಕೊರತೆ ಇತ್ತು ಎಂಬುದು ಎಲ್ಲರಿಗೂ ತಿಳಿದಿತ್ತು, ಆದರೂ ಗೌತಮ್ ಗಂಭೀರ್ ಸಾವಿರಾರು ಸ್ಟ್ರಿಪ್ ಗಳಷ್ಟು ಮಾತ್ರೆಗಳನ್ನು ಸಂಗ್ರಹಿಸಿದ್ದರು. ಆ ದಿನ ಔಷಧದ ಅಗತ್ಯವಿದ್ದ ಅದೆಷ್ಟೋ ಮಂದಿಗೆ ಸಿಗಲಿಲ್ಲ ಎಂದು ಹೇಳಿರುವ ಕೋರ್ಟ್ ಔಷಧ ನಿಯಂತ್ರಕ ಸಲ್ಲಿಸಿದ್ದ ತನಿಖಾ ಸ್ಥಿತಿಗತಿ ವರದಿಯನ್ನು ಸ್ವೀಕರಿಸಲು ನಿರಾಕರಿಸಿದೆ. 

ಸರಬರಾಜಿನ ಕೊರತೆ ಇತ್ತು ಎಂದು ನೀವು ಹೇಳುವುದು ತಪ್ಪು, ನಾವು ಕಣ್ಣುಮುಚ್ಚಿಕೊಂಡಿರಬೇಕು ಎಂದು ಬಯಸುತ್ತೀರಾ? ಇದರಿಂದ ಪಾರಾಗಬಹುದು ಎಂದುಕೊಂಡಿದ್ದೀರಾ? ನಮ್ಮ ಮೇಲೆ ಸವಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ನಿಮ್ಮಿಂದ ಕೆಲಸ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ನಮಗೆ ಹೇಳಿ, ನಿಮ್ಮನ್ನು ಅಮಾನತುಗೊಳಿಸುತ್ತೇವೆ, ಬೇರೆ ಯಾರಾದರೂ ನಿಮ್ಮ ಕೆಲಸ ಮಾಡಲಿ ಎಂದು ನ್ಯಾ.ವಿಪಿನ್ ಸಂಘಿ, ನ್ಯಾ.ಜಸ್ಮೀತ್ ಸಿಂಗ್ ಅವರಿದ್ದ ಪೀಠ ಹೇಳಿದೆ

ಈ ರೀತಿಯ ಕೆಲಸಗಳನ್ನು ಮುಂದುವರೆಸುವುದಾಗಿ ಹೇಳಿದ್ದ ಗಂಭೀರ್ ಅವರನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. "ಈ ರೀತಿ ಮಾಡುವುದು ತಪ್ಪು ಎಂದು ಈಗಾಗಲೇ ಕೋರ್ಟ್ ಹೇಳಿದೆ, ತಾವೇ ಸಮಸ್ಯೆ ಸೃಷ್ಟಿಸಿ ತಾವೇ ರಕ್ಷಕರಂತೆ ಜನತೆಗೆ ತೋರಿಸಿಕೊಳ್ಳುವ ಜನರ ಮನಸ್ಥಿತಿಯನ್ನು ಖಂಡಿಸಬೇಕಿದೆ. ಒಂದು ವೇಳೆ ಇದು ಮುಂದುವರೆದರೆ ಅಂಥಹ ವರ್ತನೆಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಮಗೆ ತಿಳಿದಿದೆ ಎಂದು" ಕೋರ್ಟ್ ಎಚ್ಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com