3 ಸಾವಿರ ಕೋಟಿ ರೂ. ದಾಟಿದ ರಾಮ ಮಂದಿರ ಟ್ರಸ್ಟ್ ದೇಣಿಗೆ, ಟಿಸಿಎಸ್ ಗೆ ಖಾತೆ ನಿರ್ವಹಣೆ ಹೊಣೆ
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿದ್ದು, ಈಗ 3 ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ದೇಣಿಗೆ ಸಂಗ್ರಹಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್...
Published: 03rd November 2021 02:59 PM | Last Updated: 03rd November 2021 04:08 PM | A+A A-

ರಾಮ ಮಂದಿರ
ಲಖನೌ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿದ್ದು, ಈಗ 3 ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ದೇಣಿಗೆ ಸಂಗ್ರಹಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಕಾರ್ಪೊರೇಟ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಗೆ ತನ್ನ ಹಣದ ನಿರ್ವಹಣೆಯನ್ನು ವಹಿಸಿಕೊಟ್ಟಿದೆ. ಟಿಸಿಎಸ್ ದೇಣಿಗೆ ನಿರ್ವಹಣೆಗಾಗಿ ಲೆಕ್ಕಪತ್ರ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟ್ರಸ್ಟ್ನ ಭೂ ವ್ಯವಹಾರಗಳ ವಿವಾದಗಳ ಹಿನ್ನೆಲೆಯಲ್ಲಿ ದೇಣಿಗೆ ನಿರ್ವಹಣೆಯ ಹಸ್ತಾಂತರವನ್ನು ಪ್ರಾರಂಭಿಸಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಖಚಿತಪಡಿಸಿದ್ದಾರೆ.
ಇದನ್ನು ಓದಿ: ಮಾಸಾಂತ್ಯಕ್ಕೆ ಅಯೋಧ್ಯೆ ರಾಮ ಮಂದಿರದ ಅಡಿಪಾಯ ಕಾಮಗಾರಿ ಪೂರ್ಣ; 2023ಕ್ಕೆ ಪ್ರತಿಷ್ಠಾಪನೆ: ವಿಹೆಚ್ ಪಿ
ಉನ್ನತ ಮೂಲಗಳ ಪ್ರಕಾರ, ವಿವಾದಾತ್ಮಕ ಭೂ ವ್ಯವಹಾರಗಳ ಕುರಿತು ಚರ್ಚಿಸಲು ಆರ್ಎಸ್ಎಸ್ ಮೂವರು ಪ್ರಮುಖ ಟ್ರಸ್ಟ್ ಸದಸ್ಯರನ್ನು ಮುಂಬೈಗೆ ಕರೆದು ಸಭೆ ನಡೆಸಿದ್ದು, ಸಭೆಯ ನಂತರ, ವೃತ್ತಿಪರ ಸಂಸ್ಥೆಗೆ ಖಾತೆಗಳನ್ನು ಹಸ್ತಾಂತರಿಸುವ ಕ್ರಮವನ್ನು ಪ್ರಾರಂಭಿಸಲಾಗಿದೆ.
ಟಿಸಿಎಸ್ ತನ್ನ ಖಾತೆಗಳ ಕಚೇರಿಯನ್ನು ರಾಮಜನ್ಮಭೂಮಿ ಬಳಿಯ ರಾಮಘಾಟ್ನಲ್ಲಿ ಸ್ಥಾಪಿಸಿದೆ ಮತ್ತು ಡಿಸೆಂಬರ್ನಲ್ಲಿ ಲೆಕ್ಕಪತ್ರ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ ಟ್ರಸ್ಟ್ ಖಾತೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ.
ಟಾಟಾ ಗ್ರೂಪ್ನ ಐಟಿ ತಜ್ಞರು ಇತ್ತೀಚೆಗೆ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರಿಗೆ ಸಾಫ್ಟ್ವೇರ್ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.