ಗೋಪಾಲ್ ಗಂಜ್ (ಬಿಹಾರ): ಕಳೆದೆರಡು ದಿನಗಳಿಂದ ಬಿಹಾರದಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಪೈಕಿ 13 ಮಂದಿ ಗೋಪಾಲ್ ಗಂಜ್ ನಿವಾಸಿಗಳಾಗಿದ್ದರೆ 8 ಮಂದಿ ಬೆಟ್ಟಿಯಾದವರಾಗಿದ್ದಾರೆ.
ಇನ್ನುಳಿದಂತೆ ಗೋಪಾಲ್ ಗಂಜ್ ನ 7 ಹಾಗೂ ಬೆಟ್ಟಿಯಾದ 9 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ 16 ಮಂದಿಯ ಪೈಕಿ ಮೂವರು ದೃಷ್ಟಿ ಕಳೆದುಕೊಂಡಿದ್ದಾರೆ. ಈ ಎಲ್ಲ ಸಾವು-ನೋವಿಗೆ ನಕಲಿ ಸಾರಾಯಿ ಕಾರಣ ಅನ್ನೋ ಶಂಕೆ ವ್ಯಕ್ತಪಡಿಸಲಾಗುತ್ತಿದೆ.
ಗೋಪಾಲ್ಗಂಜ್ನಲ್ಲಿ ಮದ್ಯಪಾನ ಮಾಡಿದ ಜನ, ಮೋತಿಹಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರೆಲ್ಲರೂ ಮಹ್ಮದ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಹರ್, ಮಹಮೂದ್ಪುರ, ಮಂಗೋಲ್ಪುರ, ಬುಚೆಯಾ ನಿವಾಸಿಗಳಾಗಿದ್ದಾರೆ. ಉಳಿದವರು ಛಪ್ರಾದ ಮಸ್ರಖ್ ಪೊಲೀಸ್ ಠಾಣೆಯ ರಸೌಲಿ ಗ್ರಾಮದ ನಿವಾಸಿಗಳು. ಸ್ಥಳೀಯರ ಹೇಳಿಕೆ ಪ್ರಕಾರ, ಮಂಗಳವಾರ ಎಲ್ಲರೂ ಮದ್ಯ ಸೇವಿಸಿದ್ದರು. ಆ ನಂತರ ಅವರ ಆರೋಗ್ಯ ಹದಗೆಡುತ್ತಿದೆ ಅಂತಾ ತಿಳಿಸಿದ್ದಾರೆ. ಬುಧವಾರ ಸಂಜೆಯವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ ಅಂತಾ ಗ್ರಾಮಸ್ಥರು ಹೇಳಿದ್ದಾರೆ.
ದೀಪಾವಳಿ ಹಬ್ಬದ ವೇಳೆ ಈ ಘಟನೆ ಸಂಚಲನ ಸೃಷ್ಟಿ ಮಾಡಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಏನು ಅನ್ನೋದು ಸ್ಪಷ್ಟವಾಗಲಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆಯ ನಂತರ ಗಣಿಗಾರಿಕೆ ಸಚಿವ ಜನಕ್ ರಾಮ್ ಅವರು ಮೃತರ ಮನೆಗೆ ಭೇಟಿ ಕೊಟ್ಟರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
Advertisement