ರಾಜಸ್ಥಾನದಲ್ಲಿ ಭೀಕರ ಅಪಘಾತ: ಬಸ್, ಟ್ಯಾಂಕರ್ ಮಧ್ಯೆ ಡಿಕ್ಕಿ; 12 ಮಂದಿ ಸಜೀವ ದಹನ
ಬಾರ್ಮರ್: ಖಾಸಗಿ ಬಸ್ ಮತ್ತು ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡು ಸುಮಾರು 12 ಮಂದಿ ಸಜೀವ ದಹನವಾದ ದುರ್ಘಟನೆ ರಾಜಸ್ಥಾನದ ಬಾರ್ಮರ್-ಜೋಧ್ಪುರ ಹೆದ್ದಾರಿಯಲ್ಲಿ ನಡೆದಿದೆ.
ಟ್ಯಾಂಕರ್ ಹಾಗೂ ಬಸ್ ಮಧ್ಯೆ ಅಪಘಾತ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೆ, ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ 12 ಮಂದಿ ಸಜೀವ ದಹನವಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಅವಘಡ ಸಂಭವಿಸಿದಾಗ ಬಸ್ನಲ್ಲಿ 25 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಡಿಕ್ಕಿಯ ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಕೆಲವರು ಕಿಟಕಿ ಗ್ಲಾಸನ್ನು ಒಡೆದು ಹಾಕಿ ಹೊರಗೆ ಬಂದು ಬಚಾವ್ ಆಗಿದ್ದಾರೆ ಅಂತಾ ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ 10 ಜನರನ್ನು ರಕ್ಷಣೆ ಮಾಡಿದ್ದಾರೆ.
ಖಾಸಗಿ ಬಸ್ ಮತ್ತು ಟ್ಯಾಂಕರ್ ನಡುವಿನ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಬಾರ್ಮರ್ ಜಿಲ್ಲಾಧಿಕಾರಿಯೊಟ್ಟಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ಕುರಿತಾಗಿ ಅವರಿಗೆ ನಿರ್ದೇಶನ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.