ಇತಿಹಾಸಕಾರ, ಪದ್ಮ ವಿಭೂಷಣ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ ನಿಧನ: ಪ್ರಧಾನಿ ಮೋದಿ ಸಂತಾಪ

ಇತಿಹಾಸಕಾರ–ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ (ಬಲ್ವಂತ್‌ ಮೊರೇಶ್ವರ್‌ ಪುರಂದರೆ) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಬಾಬಾಸಾಹೇಬ್‌ ಪುರಂದರೆ
ಬಾಬಾಸಾಹೇಬ್‌ ಪುರಂದರೆ

ಪುಣೆ: ಇತಿಹಾಸಕಾರ–ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್‌ ಪುರಂದರೆ (ಬಲ್ವಂತ್‌ ಮೊರೇಶ್ವರ್‌ ಪುರಂದರೆ) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ವಾರದ ಹಿಂದೆ ನ್ಯುಮೋನಿಯಾಗೆ ಒಳಗಾಗಿದ್ದ ಬಾಬಾಸಾಹೇಬ್‌ ಪುರಂದರೆ (99) ಅವರು ಪುಣೆಯ ದೀನಾನಾಥ್ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ವೆಂಟಿಲೇಟರ್‌ ಸಹಕಾರದಲ್ಲಿ ಉಸಿರಾಡುತ್ತಿದ್ದರು.

ಮರಾಠಿಯಲ್ಲಿ ಶಿವಾಜಿ ಮಹಾರಾಜ್‌ ಕುರಿತು ಪುರಂದರೆ ಅವರು ಎರಡು ಭಾಗಗಳಲ್ಲಿ ರಚಿಸಿರುವ 900 ಪುಟಗಳ ಕೃತಿ 'ರಾಜಾ ಶಿವಛತ್ರಪತಿ' ಜನಪ್ರಿಯತೆ ಪಡೆದಿದೆ. ಮೊದಲ ಬಾರಿಗೆ 1950ರಲ್ಲಿ ಪ್ರಕಟಗೊಂಡ ಕೃತಿಯು ಈವರೆಗೂ ಹಲವು ಬಾರಿ ಮರುಮುದ್ರಣ ಕಂಡಿದೆ ಹಾಗೂ ಮರಾಠಿಗರ ಪ್ರತಿ ಮನೆಯಲ್ಲಿ ಸ್ಥಾನ ಪಡೆದಿದೆ. 1980ರ ದಶಕದಲ್ಲಿ ಶಿವಾಜಿ ಮಹಾರಾಜ್‌ ಅವರ ಜೀವನವನ್ನು ಆಧರಿಸಿ 'ಜಾಣತಾ ರಾಜ' ನಾಟಕವನ್ನು ರಚಿಸಿ, ನಿರ್ದೇಶಿಸಿದರು.

ಇತ್ತೀಚಿಗೆ 99ನೇ ವಸಂತ ಪೂರೈಸಿದ ಪುರಂದರೆ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಪುರಂದರೆ ಅವರ ನಿಧನಕ್ಕೆ ಪ್ರಧಾನಿ ಮೋದಿ ಚಿತ್ರ ಸಹಿತ ಟ್ವೀಟ್‌ ಮಾಡುವ ಮೂಲಕ ಬಾಬಾಸಾಹೇಬ್‌ ಪುರಂದರೆ ಅವರಿಗೆ ಸಂತಾಪ ಸೂಚಿಸಿದ್ದಾರೆ.  ಶಿವಶಾಹಿರ್‌ ಬಾಬಾಸಾಹೇಬ್‌ ಪುರಂದರೆ ಅವರ ಅಗಲಿಕೆಯು ಇತಿಹಾಸ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com