ಲಖನೌ: ಕರ್ನಾಟಕದ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿಯೂ ಈಗ ಹಸುಗಳಿಗೆ ಆಂಬುಲೆನ್ಸ್ ಸೇವೆಯನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಈ ಯೋಜನೆಯ ಜಾರಿಯನ್ನು ಖಚಿತಪಡಿಸಿರುವ ರಾಜ್ಯದ ಪಶುಸಂಗೋಪನೆ, ಮೀನುಗಾರಿಕೆ, ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ, "ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಸುಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಆಂಬುಲೆನ್ಸ್ ಸೇವೆಯನ್ನು ಜಾರಿಗೆ ತರುತ್ತಿದೆ" ಎಂದು ಹೇಳಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯಡಿ 515 ಆಂಬುಲೆನ್ಸ್ ಗಳು ಕಾರ್ಯನಿರ್ವಹಣೆ ಮಾಡಲಿದ್ದು, ಕರ್ನಾಟಕದಲ್ಲಿ ಕಳೆದ ವರ್ಷ ಈ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ರಾಜ್ಯದ ಪಶುಸಂಗೋಪನೆ ಸಚಿವರು ಮಾಹಿತಿ ನೀಡಿದ್ದರು.
112 ತುರ್ತು ಸೇವೆ ನಂಬರ್ ನಂತೆಯೇ ಈ ಸೇವೆಯೂ ಕಾರ್ಯನಿರ್ವಹಣೆ ಮಾಡಲಿದ್ದು, ತೀವ್ರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಸುಗಳು ಬೇಗ ಚೇತರಿಸಿಕೊಳ್ಳುವುದಕ್ಕೆ ತ್ವರಿತವಾದ ಚಿಕಿತ್ಸೆ ಲಭ್ಯವಾಗಲು ಈ ಯೋಜನೆ ಸಹಕಾರಿಯಾಗಿದೆ.
ಡಿಸೆಂಬರ್ ನಲ್ಲಿ ಇದಕ್ಕಾಗಿ ಪ್ರತ್ಯೇಕ ಕಾಲ್ ಸೆಂಟರ್ ಪ್ರಾರಂಭವಾಗಲಿದ್ದು, ಕರೆ ಮಾಡಿದ 15-20 ನಿಮಿಷಗಳಲ್ಲಿ ಆಂಬುಲೆನ್ಸ್ ನಿಗದಿತ ಸ್ಥಳಕ್ಕೆ ಆಗಮಿಸಲಿದೆ.
ಇದೇ ವೇಳೆ ಉತ್ತಮ ಗುಣಮಟ್ಟದ ವೀರ್ಯ ಹಾಗೂ ಭ್ರೂಣ ಕಸಿ ತಂತ್ರಜ್ಞಾನದ ಮೂಲಕ ರಾಜ್ಯದಲ್ಲಿ ತಳಿ ಸುಧಾರಣೆ, ಅಭಿವೃದ್ಧಿ ಯೋಜನೆಗೂ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Advertisement