ತಮಾಷೆ ಮಾಡುತ್ತ ಗುದದ್ವಾರಕ್ಕೆ ಏರ್ ಪಂಪ್​ ಹೊಡೆದ ಸಹೋದ್ಯೋಗಿಗಳು; ವ್ಯಕ್ತಿ ಸಾವು

ತಮಾಷೆ ಮಾಡುತ್ತ ಗುದದ್ವಾರಕ್ಕೆ ಏರ್ ಪಂಪ್​ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ: ತಮಾಷೆ ಮಾಡುತ್ತ ಗುದದ್ವಾರಕ್ಕೆ ಏರ್ ಪಂಪ್​ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ನಾರ್ತ್ ಬ್ರೂಕ್ ಜೂಟ್ ಮಿಲ್‌ನಲ್ಲಿ ನವೆಂಬರ್ 16 ರಂದು ಈ ಘಟನೆ ನಡೆದಿದ್ದು, ಗಿರಣಿಯಲ್ಲಿ ಕೆಲಸ ಮಾಡುವ ಕೆಲಸಗಾರರು ತಮಾಷೆಗಾಗಿ ಸಹೋದ್ಯೋಗಿ ರೆಹಮತ್ ಅಲಿ ಎಂಬುವವರಿಗೆ ಗುದದ್ವಾರದ ಮೂಲಕ ದೇಹಕ್ಕೆ ಗಾಳಿಯನ್ನು ಪಂಪ್ ಮಾಡಿದ್ದಾರೆ. ಈ ವೇಳೆ ತೀವ್ರ ಅನಾರೋಗ್ಯಕ್ಕೀಡಾದ ರೆಹಮತ್ ಅಲಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ದಿನಗಳ ಚಿಕಿತ್ಸೆಯ ನಂತರ ರೆಹಮತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಘಟನೆ?
ರೆಹಮತ್ ಅಲಿ ರಾತ್ರಿ ಪಾಳಿಯಲ್ಲಿದ್ದ ವೇಳೆ ಆತನ ಸಹೋದ್ಯೋಗಿಗಳು ಆತನನ್ನು ಹಿಡಿದು ಗುದದ್ವಾರಕ್ಕೆ ಪೈಪ್ ಅಳವಡಿಸಿ ದೇಹಕ್ಕೆ ಗಾಳಿಯನ್ನು ಪಂಪ್ ಮಾಡಿದ್ದಾರೆ. ರೆಹಮತ್ ಅಲಿ ಇದನ್ನು ವಿರೋಧಿಸಿದರೂ, ಅವನ ಸಹೋದ್ಯೋಗಿಗಳು ಈ ರೀತಿ ಮಾಡುವುದನ್ನು ನಿಲ್ಲಿಸಲಿಲ್ಲ. ಹೀಗೆ ಪಂಪ್​ ಮಾಡುತ್ತಿದ್ದಂತೆ ರೆಹಮತ್ ಅಲಿ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದೆ. ರೆಹಮತ್ ಅಲಿ ಅನಾರೋಗ್ಯಕ್ಕೀಡಾಗುತ್ತಿದ್ದಂತೆಯೇ ಹೆದರಿದ ಸಹೋದ್ಯೋಗಿಗಳು ಅವರನ್ನು ಹತ್ತಿರದ ಹೂಗ್ಲಿಯ ಚುಂಚೂರ ಇಮಾಂಬರಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅದರೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಘಟನೆ ನಡೆದ 10 ದಿನಗಳ ನಂತರ ಚಿಕಿತ್ಸೆ ಫಲಿಸದೆ ರೆಹಮತ್ ಅಲಿ ಸಾವಿಗೀಡಾಗಿದ್ದಾರೆ.  ಗಾಳಿಯ ಒತ್ತಡದಿಂದಾಗಿ ರೆಹಮತ್ ಅವರ ಲಿವರ್ ಸಂಪೂರ್ಣ ಹಾಳಾಗಿತ್ತು ಎಂದು ವೈದ್ಯರು ಈ ವೇಳೆ ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ರೆಹಮತ್ ಅಲಿ ಕುಟುಂಬಸ್ಥರು ಭದ್ರೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ರೆಹಮತ್ ಅಲಿ ಅವರ ಸಹೋದ್ಯೋಗಿ ಶಹಜಾದಾ ಖಾನ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಗಿರಣಿಯಲ್ಲಿ ಸೆಣಬನ್ನು ಏರ್ ಪಂಪ್ ಮೂಲಕ ಸ್ವಚ್ಛಗೊಳಿಸುವ ಜವಾಬ್ದಾರಿ ಶಹಜಾದಾ ಕೆಲಸವಾಗಿತ್ತು. ತಮಾಷೆಗಾಗಿ ಶಹಜಾದಾ ಖಾನ್ ಮಾಡಿದ ಈ ಕೃತ್ಯ ಇದೀಗ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ತಮಾಷೆ ಕೂಡ ಹೇಗೆ ಅಪಾಯವಾಗಬಹುದು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com