ನವದೆಹಲಿ:ಸಂಸತ್ ಅಧಿವೇಶನದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಹೊಸ ತಲೆ ನೋವು ಎದುರಾಗಿದ್ದು, ಅಧಿವೇಶನದಲ್ಲಿ ಮಿತ್ರ ಪಕ್ಷಗಳಿಂದಲೇ ಬಿಜೆಪಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ.
ಎನ್ ಡಿಎ ಸಮನ್ವಯ ಸಮಿತಿ ಸಭೆಯಲ್ಲಿ ಮಿತ್ರ ಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಸಿಎಎ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವುದಕ್ಕೆ ಆಗ್ರಹಿಸಿದೆ.
ಎನ್ ಪಿಪಿ ನಾಯಕ ಅಗಥಾ ಸಂಗ್ಮಾ ವರದಿಗಾರರೊಂದಿಗೆ ಮಾತನಾಡಿದ್ದು, ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮಾದರಿಯಲ್ಲೇ ಸಿಎಎ ಕಾಯ್ದೆಯನ್ನು ಹಿಂಪಡೆಯಬೇಕೆಂದು ಹೇಳಿದೆ. ಸರ್ಕಾರ ಇನ್ನೂ ಸಿಎಎ ನಿಯಮಗಳನ್ನು ನೊಟೀಫೈ ಮಾಡಿಲ್ಲ. ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಇದು ಹೆಚ್ಚು ಸೂಕ್ಷ್ಮವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಘೋಷಣೆ ಮಾಡಿದಾಗಿನಿಂದಲೂ ವಿಪಕ್ಷಗಳು ಇದೇ ಮಾದರಿಯಲ್ಲಿ ಸಿಎಎಯನ್ನೂ ಹಿಂಪಡೆಯಬೇಕೆಂದು ಆಗ್ರಹಿಸುತ್ತಿವೆ.
ಕೃಷಿ ಕಾಯ್ದೆಗೆ ವಿರೋಧ ವ್ಯಕ್ತವಾಗಿದ್ದಂತೆಯೇ ಸಿಎಎಗೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನ.29 ರಿಂದ ಸಂಸತ್ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಕೃಷಿ ಕಾಯ್ದೆ ವಾಪಸ್ ಪಡೆಯುವ ಮಸೂದೆ, 2021 ನ್ನು ಮಂಡಿಸಲಾಗುತ್ತದೆ. ಇನ್ನು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರ ಹಾಜರಾತಿ ಗರಿಷ್ಠ ಪ್ರಮಾಣದಲ್ಲಿರಬೇಕು ಎಂದು ಪಕ್ಷ ಸೂಚಿಸಿದೆ.
Advertisement