ಲಖನೌ: ಬಿಜೆಪಿ ಸರ್ಕಾರ ವಿವಿಧ ರೀತಿಯಲ್ಲಿ ಮೀಸಲಾತಿಯನ್ನು ನಿಷ್ಪರಿಣಾಮಕಾರಿಯಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಮಂಗಳವಾರ ಆರೋಪಿಸಿದ್ದಾರೆ.
ತನ್ನ ಜಾತಿವಾದಿ ಮನಸ್ಥಿತಿಯಿಂದಾಗಿ, ಮೋದಿ ಸರ್ಕಾರವು ಜಾತಿ ಆಧಾರಿತ ಒಬಿಸಿ ಜನಗಣತಿಯ ಬೇಡಿಕೆ ಬಗ್ಗೆ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಬಿಎಸ್ ಪಿ ಮುಖ್ಯಸ್ಥೆ, ತಮ್ಮ ಪಕ್ಷದ ಒಬಿಸಿ ಸಮುದಾಯ, ಅಲ್ಪಸಂಖ್ಯಾತ ಸಮುದಾಯ ವಿಶೇಷವಾಗಿ ಮುಸ್ಲಿಂ ಮತ್ತು ಜಾಟ್ ಸಮುದಾಯದ ನಾಯಕರಿಗೆ ತಮ್ಮ ಸಮುದಾಯದ ಜನರನ್ನು ಮೀಸಲು ಸ್ಥಾನಗಳಿಗೆ ಕರೆತರುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಿದರು.
"ರಾಜ್ಯದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರವು ಮೊದಲಿನಂತೆಯೇ ಒಬಿಸಿಗಳು, ಮುಸ್ಲಿಮರು ಮತ್ತು ಜಾಟ್ಗಳ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಿದೆ" ಎಂದು ಮಾಯಾವತಿ ಹೇಳಿದರು.
ಬಿಎಸ್ಪಿ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ಮತ್ತೊಮ್ಮೆ ಹೇಳಿದ ಮಾಯಾವತಿ, ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement