ಅಮೃತ್ 2.0,ಸ್ವಚ್ಛ ಭಾರತ್ ಮಿಷನ್-ನಗರ 2.0ಗೆ ಚಾಲನೆ: ಕಸ ಮುಕ್ತ ನಗರ ನಿರ್ಮಾಣ, ಬೃಹತ್ ಕಸದ ರಾಶಿ ಶೀಘ್ರ ತೆರವು: ಪ್ರಧಾನಿ ಮೋದಿ

ದೇಶದ ಎಲ್ಲ ನಗರಗಳನ್ನು ಕಸಮುಕ್ತ ನಗರಗಳನ್ನಾಗಿ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶದ ಎಲ್ಲ ನಗರಗಳನ್ನು ಕಸಮುಕ್ತ ನಗರಗಳನ್ನಾಗಿ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ವಚ್ಛ ಭಾರತ್ ಮಿಷನ್-ನಗರ 2.0 ಮತ್ತು ಅಮೃತ್ 2.0 ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಅವರು ದೇಶದಲ್ಲಿ ಪ್ರತಿದಿನ 1 ಲಕ್ಷ ಟನ್ ಕಸ ಉತ್ಪಾದನೆಯಾಗುತ್ತಿದ್ದು ಅದನ್ನು ನಿರ್ವಹಣೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಕಸಮುಕ್ತ ನಗರವಾಗಿರುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ಮತ್ತು ಸುರಕ್ಷತಾ ನಿರ್ವಹಣೆಗೆ ಒತ್ತು ನೀಡುವ ಮೂಲಕ ಕೊಳಚೆ ನೀರು ನದಿಗೆ ಸೇರಿದಂತೆ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ದಾರೆ.

2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಸಮಯದಲ್ಲಿ ಉತ್ಪತ್ತಿಯಾಗುತ್ತಿದ್ದ ಪೈಕಿ ಶೇ.20ರಷ್ಟು ಕಸ ಸಂಸ್ಕರಣೆ ಮಾಡಲಾಗುತ್ತಿತ್ತು. ಇದೀಗ ಈ ಪ್ರಮಾಣವನ್ನು ಪ್ರತಿದಿನ  ಶೇಕಡ 70ಕ್ಕೆ ಹೆಚ್ಚು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಶೇಕಡಾ ನೂರಕ್ಕೆ ತೆಗೆದುಕೊಂಡು ಹೋಗುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಭಾರತದ ಎರಡು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು ಬೀದಿಬದಿ ಮಾರಾಟಗಾರರಿಗೆ ಗರಿಷ್ಠ ಸಾಲಗಳನ್ನು ಒದಗಿಸಿದೆ. ರಾಜ್ಯಗಳು ಈ ನಿಟ್ಟಿನಲ್ಲಿ ಸ್ಪರ್ಧಿಸಬೇಕು, ತಮ್ಮ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳಿಗೆ ಮತ್ತಷ್ಟು ಸಹಾಯ ಮಾಡಬೇಕು. ಇದು ನಮ್ಮ ನಗರ ಬಡವರನ್ನು ಮತ್ತಷ್ಟು ಸಬಲಗೊಳಿಸುತ್ತದೆ. ರಾಜ್ಯಗಳು ಈ ನಿಟ್ಟಿನಲ್ಲಿ ಸ್ಪರ್ಧಿಸಬೇಕು, ತಮ್ಮ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳಿಗೆ ಮತ್ತಷ್ಟು ಸಹಾಯ ಮಾಡಬೇಕು. ಇದು ನಮ್ಮ ನಗರ ಬಡವರನ್ನು ಮತ್ತಷ್ಟು ಸಬಲಗೊಳಿಸುತ್ತದೆ ಎಂದು ಮೋದಿ ಹೇಳಿದರು.

ಬೃಹತ್ ಕಸದ ರಾಶಿ​ ಶೀಘ್ರ ತೆರವು:
ಇದೇ ವೇಳೆ ದೇಶದ ವಿವಿಧ ನಗರಗಳಲ್ಲಿ ಬೃಹತ್ ಕಸದ ರಾಶಿಗಳಾಗಿ ಮಾರ್ಪಟ್ಟಿದ್ದು ಈ ಕಸದ ಗುಡ್ಡೆಗಳನ್ನು ತೆರವು ಮಾಡುವ ಕೆಲಸ ಮುಂದುವರೆದಿದೆ. ಸ್ವಚ್ಛ ಭಾರತ ಎರಡನೇ ಅಭಿಮಾನದಲ್ಲಿ ಇಂತಹ ಶಿಖರಗಳು ಎಲ್ಲೆಲ್ಲಿವೆ ಅದನ್ನು ಗುರುತಿಸಿ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು. ದೆಹಲಿಯಲ್ಲಿರುವ ಇಂತಹ ಒಂದು ಕಸದ ರಾಶಿಯನ್ನು ತೆಗೆದು ಹಾಕಲು ಹಲವು ದಿನಗಳಿಂದ ಜನ ಕಾಯುತಿದ್ದಾರೆ.  ದೇಶದ ಹಲವು ಭಾಗಗಳಲ್ಲಿದ್ದ ರೀತಿಯ ಕಸದ ಗುಡ್ಡಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಚಾಕಲೇಟ್ ರ್ಯಾಪರ್ ಅನ್ನು ಜೇಬಿನಲ್ಲಿಟ್ಟುಕೊಳ್ಳಿ: ಮಕ್ಕಳಿಗೆ ಪ್ರಧಾನಿ ಮನವಿ
ಚಾಕಲೇಟ್ ತಿಂದು ಅದರ ಪೇಪರ್ ಎಲ್ಲೆಂದರಲ್ಲಿ ಎಸೆಯದೆ ಅದನ್ನು ಜೇಬಿನಲ್ಲಿ ಹಾಕಿಕೊಂಡು ಅದನ್ನು ನಿಗದಿತ ಡಬ್ಬಿ ಅಥವಾ ಪ್ರದೇಶದಲ್ಲಿ ಹಾಕುವಂತೆ ಹಿರಿಯರು ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸುವ ಮೂಲಕ ಅದರ ಸಂಸ್ಕರಣ ಸಹಕಾರ ನೀಡಬೇಕು. ಎರಡನೇ ಹಂತದ ಸ್ವಚ್ಛ ಭಾರತ ಮಿಷನ್ ನಗರ2.0 ಮತ್ತು ಅಮೃತ 2.0 ಯೋಜನೆ ಡಾ. ಬಿಆರ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ನಗರಗಳ ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ

ಏನಿದು ಪ್ರಧಾನಿ ಮೋದಿ ಅವರ 2.0 ಯೋಜನೆಗಳು?
ʻಸ್ವಚ್ಛ ಭಾರತ ಯೋಜನೆ-ನಗರ 2.0ʼ (ಎಸ್‌ಬಿಎಂ-ಯು 2.0)

ಈ ಯೋಜನೆಯು ಎಲ್ಲಾ ನಗರಗಳನ್ನು 'ಕಸ ಮುಕ್ತ'ಗೊಳಿಸುವ ಮತ್ತು ʻಅಮೃತ್ʼ ವ್ಯಾಪ್ತಿಗೆ ಒಳಪಟ್ಟ ನಗರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ನಗರಗಳಲ್ಲಿ ತ್ಯಾಜ್ಯ ನೀರಿನ ಸೂಕ್ತ ನಿರ್ವಹಣೆಯ ಉದ್ದೇಶವನ್ನು ಹೊಂದಿದೆ. ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತವಾಗುವಂತೆ (ಒಡಿಎಫ್‌+) ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಸಂಸ್ಥೆಗಳು ಒಡಿಎಫ್++ ಆಗಿರುವಂತೆ ಖಾತರಿಪಡಿಸುತ್ತದೆ. ಆ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯದ ಗುರಿಯನ್ನು ಸಾಧಿಸುತ್ತದೆ. ಮೂಲದಲ್ಲೇ ಘನ ತ್ಯಾಜ್ಯದ ವಿಂಗಡಣೆ, ʻ3ಆರ್ʼ (ಕಡಿಮೆಮಾಡುವುದು, ಮರುಬಳಕೆ, ಸಂಸ್ಕರಣೆ), ಪುರಸಭೆಯ ಎಲ್ಲಾ ರೀತಿಯ ಘನ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಕಸ ಸುರಿಯುವ ಸ್ಥಳಗಳಲ್ಲಿ ಮಾಲಿನ್ಯಕಾರಕಗಳ ನಿವಾರಣೆಯತ್ತ ಈ ಯೋಜನೆಯು ಗಮನ ಹರಿಸಲಿದೆ. ಈ ಯೋಜನೆಯ ವೆಚ್ಚ ಸುಮಾರು 1.41 ಲಕ್ಷ ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.

ʻಅಮೃತ್ 2.0ʼ
ʻಅಮೃತ್ 2.0ʼ ಯೋಜನೆಯು ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಸುಮಾರು 2.68 ಕೋಟಿ ನೀರಿನ ಕೊಳಾಯಿ ಸಂಪರ್ಕಗಳನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲು ಉದ್ದೇಶಿಸಲಾಗಿದೆ. ಜೊತೆಗೆ 500 ಅಮೃತ್ ನಗರಗಳಲ್ಲಿ 2.64 ಕೋಟಿ ಒಳಚರಂಡಿ/ ಶೌಚಾಲಯ ತ್ಯಾಜ್ಯ ಸಂಪರ್ಕಗಳನ್ನು ಒದಗಿಸುವ ಮೂಲಕ ಶೇ,100ರಷ್ಟು ಒಳಚರಂಡಿ ಮತ್ತು ಶೌಚಾಲಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ10.5 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯಲಿದ್ದಾರೆ.

ನಗರಗಳ ನಡುವೆ ಪ್ರಗತಿಪರ ಸ್ಪರ್ಧೆ
ʻಅಮೃತ್ 2.0ʼ ಯೋಜನೆಯು ಆವರ್ತನ ಆರ್ಥಿಕತೆಯ ತತ್ವಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಮೇಲ್ಮೈ ಮತ್ತು ಅಂತರ್ಜಲ ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನವನ್ನು ಉತ್ತೇಜಿಸುತ್ತದೆ. ಇತ್ತೀಚಿನ ಜಾಗತಿಕ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನೀರಿನ ನಿರ್ವಹಣೆಯಲ್ಲಿ ದತ್ತಾಂಶ ಆಧರಿತ ಆಡಳಿತ ಹಾಗೂ ʻತಂತ್ರಜ್ಞಾನ ಉಪ-ಯೋಜನೆʼಯನ್ನು ʻಅಮೃತ್‌ 2.0' ಉತ್ತೇಜಿಸುತ್ತದೆ. ನಗರಗಳ ನಡುವೆ ಪ್ರಗತಿಪರ ಸ್ಪರ್ಧೆಯನ್ನು ಉತ್ತೇಜಿಸಲು 'ಪೇ ಜಲ್ ಸುರ್ವೇಕ್ಷಣ್' ಅನ್ನು ನಡೆಸಲಾಗುತ್ತದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 2.87 ಲಕ್ಷ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಕಳೆದ ಏಳು ವರ್ಷಗಳಲ್ಲಿ ನಗರ ಭೂದೃಶ್ಯವನ್ನು ಸುಧಾರಿಸಲು ʻಎಸ್‌ಬಿಎಂ-ಯುʼ ಮತ್ತು ʻಅಮೃತ್ʼ ಗಮನಾರ್ಹ ಕೊಡುಗೆ ನೀಡಿವೆ. ಈ ಎರಡು ಪ್ರಮುಖ ಯೋಜನೆಗಳು ನಾಗರಿಕರಿಗೆ ನೀರು ಸರಬರಾಜು ಮತ್ತು ನೈರ್ಮಲ್ಯದ ಮೂಲಸೌಕರ್ಯ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಸ್ವಚ್ಛತೆಯು ಇಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚಮುಕ್ತ (ಒಡಿಎಫ್) ಎಂದು ಘೋಷಿಸಲಾಗಿದೆ ಮತ್ತು ಶೇ.70 ಘನ ತ್ಯಾಜ್ಯವನ್ನು ಈಗ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ. 1.1 ಕೋಟಿ ಗೃಹ ನೀರಿನ ನಲ್ಲಿ ಸಂಪರ್ಕಗಳು ಮತ್ತು 85 ಲಕ್ಷ ಒಳಚರಂಡಿ ಸಂಪರ್ಕಗಳನ್ನು ಸೇರಿಸುವ ಮೂಲಕ ನೀರಿನ ಭದ್ರತೆಯನ್ನು ʻಅಮೃತ್ʼ ಯೋಜನೆ ಖಾತರಿಪಡಿಸುತ್ತದೆ. ಇದರಿಂದಾಗಿ 4 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com