ಮುಂಬೈ: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಶಿವಸೇನೆ ತೀವ್ರ ಕಿಡಿಕಾರಿದ್ದು, ಉತ್ತರ ಪ್ರದೇಶ ಪಾಕಿಸ್ತಾನದಲ್ಲಿದೆಯೇ ಎಂದು ಪ್ರಶ್ನಿಸಿದೆ.
ಈ ಕುರಿತಂತೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವತ್, 'ಉತ್ತರ ಪ್ರದೇಶವೇನು ಪಾಕಿಸ್ತಾನವೇ, ಭಾರತೀಯರು ಈ ರಾಜ್ಯಕ್ಕೆ ಪ್ರವೇಶಿಸುವುದನ್ನು ನಿಲ್ಲಿಸಲಾಗಿದೆ. ಆಡಳಿತವು ಲಖಿಂಪುರ್ ಖೇರಿಯಲ್ಲಿ ಸೆಕ್ಷನ್ 144 ಅನ್ನು ಜಾರಿಮಾಡಿದೆ. ಆದರೆ ಲಖನೌನಲ್ಲೇ ವಿರೋಧ ಪಕ್ಷದ ನಾಯಕರನ್ನು ತಡೆಯುತ್ತಿದೆ ಎಂದು ಹೇಳಿದರು.
ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಭಾನುವಾರ ಎಂಟು ಜನರು ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ, 'ಸಿಆರ್ಪಿಸಿ ಸೆಕ್ಷನ್ 144 ಅನ್ನು ಲಖೀಂಪುರ್ ಖೇರಿಯಲ್ಲಿ ವಿಧಿಸಲಾಗಿದೆ. ಅತ್ತ ನೀವು ಲಖನೌನಲ್ಲಿ ವಿರೋಧ ಪಕ್ಷದ ನಾಯಕರನ್ನು ಬಂಧಿಸುತ್ತಿದ್ದೀರಿ. ಇದು ಕಾನೂನು ಪಾಲನೆಯೇ? ಉತ್ತರ ಪ್ರದೇಶವೇನು ಪಾಕಿಸ್ತಾನದಲ್ಲಿದೆಯೇ, ಅಲ್ಲಿ ಭಾರತೀಯರು ಹೋಗುವುದನ್ನು ಏಕೆ ನಿಲ್ಲಿಸಲಾಗಿದೆ? ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಚಲಿಸುವ ನಿರ್ಬಂಧವಿದೆ. ಇದು ಹೊಸ ಲಾಕ್ಡೌನ್ ಆಗಿದೆಯೇ? ಎಂದು ಪ್ರಶ್ನಿಸಿದರು.
ಆಡಳಿತವು ಆಡಳಿತ ಪಕ್ಷದ ಪಂಜರದ ಗಿಳಿಯಂತಾಗಿದೆ. ಸರ್ಕಾರವು ಯಾವುದೇ ಸೂಚನೆ ನೀಡಿದರೂ ಅದನ್ನು ಅನುಸರಿಸುತ್ತದೆ. ರೈತರ ಮೇಲೆ ವಾಹನ ಹರಿಸಿರುವುದಕ್ಕೆ ಪುರಾವೆಗಳಿವೆ. ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗಿದೆ, ರಾಹುಲ್ ಗಾಂಧಿ ಅವರನ್ನು ತಡೆಯಲಾಗಿದೆ. ಅವರು ಯಾವ ಅಪರಾಧ ಮಾಡಿದ್ದಾರೆ? ದೇಶದಲ್ಲಿ ಹೊಸ ಸಂವಿಧಾನವಿದೆಯೇ?.. ಎಂದು ಕಿಡಿಕಾರಿದರು. ಅಂತೆಯೇ ಲಖೀಂಪುರ್ ಖೇರಿಗೆ ನಿಯೋಗವನ್ನು ಕಳುಹಿಸಬೇಕೇ ಎಂದು ಎಲ್ಲ ವಿರೋಧ ಪಕ್ಷಗಳು ಚರ್ಚಿಸಲಿವೆ ಎಂದು ರಾವತ್ ಹೇಳಿದರು.
Advertisement