ನವದೆಹಲಿ: ಭಾರತೀಯ ವಾಯುಪಡೆಯ 89ನೇ ಸ್ಥಾಪನಾ ದಿನಾಚರಣೆ ನಿಮಿತ್ತ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿದ್ದು, ಸೇನೆಯ ಪ್ರಮುಖ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಕಾರ್ಯಾಕ್ರಮ ನಡೆಯುತ್ತಿದ್ದು, ವಾಯು ಪಡೆಯ ಮುಖ್ಯಸ್ಥರಾದ ವಿ.ಆರ್.ಚೌಧರಿ ಹಾಗೂ ಮೂರೂ ಶಸ್ತ್ರಾಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. 50 ವರ್ಷಗಳ ಬಳಿಕ ಆ ಕಾರ್ಯಾಚರಣೆಯ ನೆನಪಿಗಾಗಿ ಹಳೆಯ 'ಡಕೋಟಾ ವಿಮಾನದ' ಮೂಲಕ ಮೂವರು ಪ್ಯಾರಾಟ್ರೂಪರ್ಗಳು ಜಿಗಿಯಲಿದ್ದಾರೆ. ವಾಯು ಪಡೆಯಿಂದ ಇಬ್ಬರು ಮತ್ತು ಸೇನೆಯಿಂದ ಒಬ್ಬ ಪ್ಯಾರಾಟ್ರೂಪರ್ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.
ಲೋಂಗೆವಾಲಾ ಯುದ್ಧದ ವಿಜಯವನ್ನು ನೆನಪಿಸಲು 'ವಿನಾಶ್ ರಚನೆ' ಪ್ರದರ್ಶನ ನಡೆಯಲಿದೆ. ಆರು ಹಂಟರ್ ವಿಮಾನಗಳು ಈ ರಚನೆಯಲ್ಲಿ ಹಾರಾಟ ನಡೆಸಲಿವೆ. ಇದೇ ಸಮಯದಲ್ಲಿ ಪರಮ ವೀರ ಚಕ್ರ ಪುರಸ್ಕೃತ ನಿರ್ಮಲ್ಜಿತ್ ಸಿಂಗ್ ಸೆಖೋ ಅವರ ಗೌರವಾರ್ಥ 'ಸೆಖೋ ರಚನೆ' ಪ್ರದರ್ಶನ ನಡೆಯಲಿದೆ. ವಾಯು ಪಡೆಯಲ್ಲಿ ಪರಮ ವೀರ ಚಕ್ರ ಪುರಸ್ಕೃತರಾಗಿರುವ ಏಕೈಕ ವ್ಯಕ್ತಿ ನಿರ್ಮಲ್ಜಿಲ್ ಸಿಂಗ್. ಸೆಖೋ ರಚನೆಯಲ್ಲಿ ರಫೇಲ್, ತೇಜಸ್, ಜಾಗ್ವಾರ್, ಮಿಗ್–29 ಹಾಗೂ ಮಿರೇಜ್ 2000 ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ.
ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹಿಂಡನ್ ವಾಯುನೆಲೆಯಲ್ಲಿ 89 ನೇ ಸಂಸ್ಥಾಪನಾ ದಿನದಂದು ಏರ್ ಫೋರ್ಸ್ ಡೇ ಮೆರವಣಿಗೆಯನ್ನು ಪರಿಶೀಲಿಸಿದರು. ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ವಾಯು ಸೇನಾ ಪದಕವನ್ನು 89ನೇ ವಾಯುಪಡೆಯ ದಿನದಂದು ಹಿಂಡನ್ ವಾಯುನೆಲೆಯಲ್ಲಿ ಅಧಿಕಾರಿಗಳಿಗೆ ನೀಡಿದರು.
ವಾಯುಪಡೆಯ ಶ್ರೇಷ್ಠರ ಉತ್ತರಾಧಿಕಾರಿಯಾಗಿ ನಿಮ್ಮ ಮುಂದೆ ನಿಲ್ಲುವುದು ನನಗೆ ದೊಡ್ಡ ಗೌರವ
ಬಳಿಕ ಮಾತನಾಡಿದ ವಾಯು ಪಡೆಯ ಮುಖ್ಯಸ್ಥರಾದ ವಿ.ಆರ್.ಚೌಧರಿ, 'ವಾಯುಪಡೆ ಇಂದು ಈ ಸ್ಥಾನದಲ್ಲಿರಲು ನಮ್ಮ ಹಿರಿಯ ಅಧಿಕಾರಿಗಳ ಪರಿಶ್ರಮ ಮತ್ತು ತ್ಯಾಗಸ ಬಲಿದಾನದಿಂದ ಮಾತ್ರ. ನಿರ್ದಿಷ್ಟವಾಗಿ ಹೇಳುವುದಾದರೆ, ಸವಾಲುಗಳು ಏರುತ್ತಲೇ ಇರುವುದರಿಂದ ಮಾಜಿ ಮುಖ್ಯಸ್ಥರ ದೂರದೃಷ್ಟಿಯ ನಾಯಕತ್ವಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಹಾಗಾಗಿ ನಮ್ಮ ಶಕ್ತಿ ಮತ್ತು ವಾಯು ಶಕ್ತಿಯ ಅತ್ಯುತ್ತಮ ಅನ್ವಯವನ್ನು ಖಚಿತಪಡಿಸಿಕೊಳ್ಳಲು ಸಂಕಲ್ಪ ಮಾಡುತ್ತೇವೆ. ಇಂದು ನಾವು ನಿಂತಿರುವ ಸ್ಥಾನಕ್ಕೆ ಕರೆತಂದ ಕಮಾಂಡರ್ಗಳ ಶ್ರೇಷ್ಠರ ಉತ್ತರಾಧಿಕಾರಿಯಾಗಿ ನಿಮ್ಮ ಮುಂದೆ ನಿಲ್ಲುವುದು ನನಗೆ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಅಲ್ಲದೆ 'ಭಾರತೀಯ ವಾಯುಪಡೆ 90 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಇಂದು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ನೀಲಿ ಬಣ್ಣದ ಪುರುಷ ಮತ್ತು ಮಹಿಳೆಯರು ಶೌರ್ಯ, ತ್ಯಾಗ ಮತ್ತು ಪ್ರವರ್ತಕ ಮನೋಭಾವದ ಹೆಮ್ಮೆಯ ಪಾಲಕರಾಗಿದ್ದಾರೆ. ನಿಮಗೆ ಸ್ಪಷ್ಟ ನಿರ್ದೇಶನಗಳು, ಉತ್ತಮ ನಾಯಕತ್ವ ಮತ್ತು ನಾನು ಸಂಗ್ರಹಿಸಬಹುದಾದ ಅತ್ಯುತ್ತಮ ಸಂಪನ್ಮೂಲಗಳನ್ನು ಒದಗಿಸಲು ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾನು ಪ್ರತಿಜ್ಞೆ ಮಾಡುತ್ತೇನೆ. ನಾವು ಇಂದು ಎದುರಿಸುತ್ತಿರುವ ಭದ್ರತಾ ಸನ್ನಿವೇಶವನ್ನು ನಾನು ನೋಡಿದಾಗ, ನಿರ್ಣಾಯಕ ಸಮಯದಲ್ಲಿ ನಾನು ಆಜ್ಞೆಯನ್ನು ವಹಿಸಿಕೊಂಡಿದ್ದೇನೆ ಎಂದು ನನಗೆ ತೀವ್ರ ಅರಿವಿದೆ. ಬಾಹ್ಯ ಶಕ್ತಿಗಳು ನಮ್ಮ ಪ್ರದೇಶವನ್ನು ಉಲ್ಲಂಘಿಸಲು ಅನುಮತಿಸುವುದಿಲ್ಲ ಎಂಬುದನ್ನು ನಾವು ರಾಷ್ಟ್ರಕ್ಕೆ ತೋರಿಸಬೇಕು ಎಂದು ಹೇಳಿದರು.
ಚೀನಾ ಪ್ರಚೋದನೆಗೆ ಪ್ರತಿಕ್ರಿಯೆ ನೀಡಲು ವಾಯುಪಡೆ ಸಜ್ಜು
ಪೂರ್ವ ಲಡಾಖ್ನಲ್ಲಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸುವ ತ್ವರಿತ ಕ್ರಮಗಳು ಭಾರತೀಯ ವಾಯುಪಡೆಯ ಯುದ್ಧ ಸನ್ನದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಪ್ರದೇಶ ಮತ್ತು ಅದರಾಚೆಗಿನ ಭದ್ರತಾ ವಾತಾವರಣವು ಭೌಗೋಳಿಕ ರಾಜಕೀಯ ಪಡೆಗಳ ಸಂಕೀರ್ಣ ಪರಸ್ಪರ ಪ್ರಭಾವದಿಂದ ಪ್ರಭಾವಿತವಾಗಿದೆ. ಯಾವುದೇ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡಲು ಸಿದ್ದವಿದೆ ಚೌದರಿ ಹೇಳಿದರು.
ವಾಯುಪಡೆ ಸಂಕ್ಷಿಪ್ತ ಇತಿಹಾಸ
ಯುನೈಟೆಡ್ ಕಿಂಗ್ಡಮ್ನ (ಇಂಗ್ಲೆಂಡ್) ರಾಯಲ್ ಏರ್ ಫೋರ್ಸ್ಗೆ ಬೆಂಬಲವಾಗಿ 1932ರ ಅಕ್ಟೋಬರ್ 8ರಂದು ಭಾರತೀಯ ವಾಯು ಪಡೆ ಸ್ಥಾಪನೆಯಾಯಿತು. ಆರಂಭದಲ್ಲಿ ದೇಶದ ವಾಯು ಪಡೆಯನ್ನು 'ರಾಯಲ್ ಇಂಡಿಯನ್ ಏರ್ ಫೋರ್ಸ್' ಎಂದೇ ಕರೆಯಲಾಗುತ್ತಿತ್ತು. ಭಾರತ ಗಣ್ಯರಾಜ್ಯವಾದ ನಂತರ 1950ರಲ್ಲಿ 'ರಾಯಲ್' ಪದವನ್ನು ತೆಗೆದು ಹಾಕಲಾಯಿತು. ಭಾರತದ ವಾಯು ಪಡೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ವಾಯು ಪಡೆಯಾಗಿದೆ. ಏರ್ ಚೀಫ್ ಮಾರ್ಷಲ್ (ಎಸಿಎಂ) ವಾಯು ಪಡೆಯ ಮುಖ್ಯಸ್ಥರಾಗಿರುತ್ತಾರೆ ಹಾಗೂ ಭಾರತದ ರಾಷ್ಟ್ರಪತಿ ಶಸ್ತ್ರಾಸ್ತ್ರ ಪಡೆಗಳ ಕಮಾಂಡರ್–ಇನ್–ಚೀಫ್ ಆಗಿರುತ್ತಾರೆ. 1971ರ ಯುದ್ಧದ ವೀರ ಯೋಧರಿಗೆ ಇವತ್ತಿನ ವಾಯು ಪಡೆ ದಿನದ ಪರೇಡ್ನಲ್ಲಿ ಗೌರವ ಸಲ್ಲಿಸಲಾಗುತ್ತಿದೆ. 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತವು ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು. ಆ ಯುದ್ಧದ ಸನ್ನಿವೇಶವನ್ನೇ ಬದಲಿಸಿದ್ದು ವಾಯು ಪಡೆಯ 'ತಂಗೈಲ್ ಏರ್ಡ್ರಾಪ್' ಕಾರ್ಯಾಚರಣೆಯಾಗಿದೆ.
Advertisement