ಕೇರಳ ಮಳೆಗೆ ತತ್ತರ: ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 9 ಮಕ್ಕಳು ಸೇರಿ 25ಕ್ಕೆ ಏರಿಕೆ

ಕಳೆದ ಕೆಲ ದಿನಗಳಿಂದ ಕೇರಳ ರಾಜ್ಯದ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಸುರಿಯುತ್ತಿರುವ ಅವ್ಯಾಹತ ಮಳೆಗೆ ಅವಘಡ ಸಂಭವಿಸಿ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ. ಅವರಲ್ಲಿ 9 ಮಕ್ಕಳು ಕೂಡ ಸೇರಿದ್ದಾರೆ.
ನದಿಯ ನೀರು ಹರಿದು ಬಂದ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಪಕ್ಕಕ್ಕೆ ವಾಲಿ ನಿಂತಿರುವುದು
ನದಿಯ ನೀರು ಹರಿದು ಬಂದ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಪಕ್ಕಕ್ಕೆ ವಾಲಿ ನಿಂತಿರುವುದು

ತಿರುವನಂತಪುರ: ಕಳೆದ ಕೆಲ ದಿನಗಳಿಂದ ಕೇರಳ ರಾಜ್ಯದ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಸುರಿಯುತ್ತಿರುವ ಅವ್ಯಾಹತ ಮಳೆಗೆ ಅವಘಡ ಸಂಭವಿಸಿ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ. ಅವರಲ್ಲಿ 9 ಮಕ್ಕಳು ಕೂಡ ಸೇರಿದ್ದಾರೆ.

ನಾಡಿದ್ದು ಬುಧವಾರದಿಂದ ಮತ್ತಷ್ಟು ಧಾರಾಕಾರ ಮಳೆ ರಾಜ್ಯದಾದ್ಯಂತ ಸುರಿಯಬಹುದೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ 13 ಮಂದಿ ಮೃತಪಟ್ಟಿದ್ದು ಅವರಲ್ಲಿ 12 ಮಂದಿ ಕೂಟ್ಟಿಕ್ಕಲ್ ಪಂಚಾಯತ್ ವಲಯವೊಂದರಲ್ಲಿಯ ಜನರಾಗಿದ್ದಾರೆ. ಮೊನ್ನೆ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ 10 ಮಂದಿ ಮೃತಪಟ್ಟಿದ್ದರೆ ಮತ್ತಿಬ್ಬರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಭೂಕುಸಿತದಿಂದ ಮಣ್ಣಿನ ಅವಶೇಷಗಳಡಿ ಸಿಕ್ಕಿಹಾಕಿಕೊಂಡವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕೂವಪಲ್ಲಿ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮತ್ತೊಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ.

ಇಡುಕ್ಕಿ ಜಿಲ್ಲೆಯಲ್ಲಿ 6 ಮಂದಿ ಕೊಕ್ಕಯಾರ್ ಭೂಕುಸಿತಕ್ಕೆ ಮೃತಪಟ್ಟಿದ್ದಾರೆ. ಮಗುವೊಂದು ನಾಪತ್ತೆಯಾಗಿದೆ. ಕೊಕ್ಕಯರ್ ಮತ್ತು ಪೆರುವಂತನಮ್ ಗ್ರಾಮಗಳಲ್ಲಿ ಇಬ್ಬರು ವ್ಯಕ್ತಿಗಳು ಮಳೆ ಸಂಬಂಧಿ ಅವಘಡಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ತೊಡುಪುಝದಲ್ಲಿ ಕಾರು ನೀರಿನಲ್ಲಿ ಕೊಚ್ಚಿ ಹೋಗಿ ಇಬ್ಬರು ನಾಪತ್ತೆಯಾಗಿದ್ದಾರೆ.

ನಿನ್ನೆ, ಒಂದೂವರೆ ವರ್ಷದ ಬಾಲಕ ಕೋಝಿಕ್ಕೋಡ್‌ನಲ್ಲಿ ಮುಳುಗಿ ಮೃತಪಟ್ಟರೆ, ವಿಠುರ ಸಮೀಪದ ನೆಲ್ಲಿಕುನ್ನು ಎಂಬಲ್ಲಿ ಚೆಕ್ ಡ್ಯಾಮ್‌ಗೆ ಬಿದ್ದು 23 ವರ್ಷದ ವ್ಯಕ್ತಿ ತಿರುವನಂತಪುರಂನಲ್ಲಿ ಮೃತಪಟ್ಟಿದ್ದಾರೆ. ಈ ಮಧ್ಯೆ, ಕಳೆದ ಮಂಗಳವಾರದಿಂದ ನಿನ್ನೆಯವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 35 ಜನರ ಸಾವನ್ನು ರಾಜ್ಯ ಸರ್ಕಾರ ಖಚಿತಪಡಿಸಿದೆ. ಈ ವರ್ಷ ಇಲ್ಲಿಯವರೆಗೆ ಒಟ್ಟು 96 ಜನರು ನೈಸರ್ಗಿಕ ವಿಕೋಪಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ.

ಬುಧವಾರದ ವೇಳೆಗೆ ಮಳೆ ಉಲ್ಭಣ: ನಾಡಿದ್ದು ಬುಧವಾರದವರೆಗೆ ಮಳೆ ಮತ್ತಷ್ಟು ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಕೇರಳದಲ್ಲಿ ಉಂಟಾದ ಕಡಿಮೆ ಒತ್ತಡದ ಪ್ರದೇಶವು ರಾಜ್ಯಕ್ಕೆ ಭಾರೀ ಮಳೆಯನ್ನು ಉಂಟುಮಾಡಲಿದೆ. ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾದ ನಂತರ ಮತ್ತು ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ ನಂತರ 4 ಸಾವಿರದ 713 ಜನರಿಗೆ ಅವಕಾಶ ಕಲ್ಪಿಸಲು ರಾಜ್ಯದಲ್ಲಿ 156 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಂದು ಕಂದಾಯ ಸಚಿವ ಕೆ ರಾಜನ್ ಅವರ ಕಚೇರಿ ತಿಳಿಸಿದೆ. ಪ್ರಕ್ಷುಬ್ಧ ವಾತಾವರಣದ ಸಂದರ್ಭದಲ್ಲಿ ಜನರು ಪರಿಹಾರ ಶಿಬಿರಗಳಿಗೆ ತೆರಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.

12 ಅಣೆಕಟ್ಟುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೆಡ್ ಅಲರ್ಟ್: ಹೆಚ್ಚಿನ  ಪರಿಹಾರ ಶಿಬಿರಗಳನ್ನು ತೆರೆಯಲು ಸರ್ಕಾರ ವ್ಯವಸ್ಥೆ ಮಾಡಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) ಸುಮಾರು ಆರು ತಂಡಗಳನ್ನು ಈಗಾಗಲೇ ಪತ್ತನಂತಿಟ್ಟ, ಅಲಪುಳ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಭಾನುವಾರ, ಐದು ಹೆಚ್ಚುವರಿ ತಂಡಗಳನ್ನು ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ಕಣ್ಣೂರು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಭಾರತೀಯ ಸೇನೆಯ ಎರಡು ತಂಡಗಳನ್ನು ತಿರುವನಂತಪುರಂ ಮತ್ತು ಕೊಟ್ಟಾಯಂನಲ್ಲಿ ನಿಯೋಜಿಸಲಾಗಿದೆ ಮತ್ತು ರಕ್ಷಣಾ ಭದ್ರತಾ ದಳದ (ಡಿಎಸ್‌ಸಿ) ಎರಡು ತಂಡಗಳನ್ನು ಕೋಝಿಕ್ಕೋಡು ಮತ್ತು ವಯನಾಡ್‌ನಲ್ಲಿ ನಿಯೋಜಿಸಲಾಗಿದೆ. ಬೆಂಗಳೂರಿನಿಂದ ಎಂಜಿನಿಯರ್‌ಗಳ ಕಾರ್ಯಪಡೆಯ ತಂಡವು ಕಟ್ಟಿಕಲ್ ತಲುಪಿದೆ. ಕೊಚ್ಚಿಯಲ್ಲಿ ನೆಲೆಗೊಂಡಿರುವ ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಸಿದ್ಧವಾಗಿವೆ. ಪತ್ತನಂತಿಟ್ಟದ ಮಲ್ಲಪ್ಪಲ್ಲಿ ಅವರ ಮನೆಗಳಲ್ಲಿ ಸಿಲುಕಿಕೊಂಡವರನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಆಹಾರ ಮತ್ತು ನೀರು ಸೇರಿದಂತೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಲು ಕೂಟ್ಟಿಕ್ಕಲ್ ಮತ್ತು ಕೊಕ್ಕಾಯಾರ್ ನಲ್ಲಿ ನೌಕಾಪಡೆಯ ಚಾಪರ್ ಅನ್ನು ಸೇವೆಗೆ ಒತ್ತಲಾಯಿತು. ಕಕ್ಕಿ, ಶೋಲಯಾರ್ ಮತ್ತು ಪೊರಿಂಗಲ್ಕುತು ಸೇರಿದಂತೆ ರಾಜ್ಯದ ಸುಮಾರು 12 ಡ್ಯಾಂಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಕ್ಕಿ ಅಣೆಕಟ್ಟಿನ ಶಟರ್ ಗಳನ್ನು ತೆರೆದರೆ ಕುಟ್ಟನಾಡಿನಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಆ ಸನ್ನಿವೇಶದಲ್ಲಿ ಒಂದು ಎನ್‌ಡಿಆರ್‌ಎಫ್ ತಂಡವನ್ನು ಆಲಪ್ಪುಳದಲ್ಲಿ ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com