ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ವರದಿಯನ್ನು ಕೊನೆಯ ಕ್ಷಣದಲ್ಲಿ ಸಲ್ಲಿಕೆ ಮಾಡಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರಿಂ ಕೋರ್ಟ್ ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಕ್ಟೋಬರ್ 3 ರಂದು ರೈತರ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದರು, ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, 44 ಮಂದಿ ಸಾಕ್ಷಿದಾರರ ಪೈಕಿ ಕೇವಲ 4 ಮಂದಿ ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿರುವ ಉತ್ತರಪ್ರದೇಶ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಉತ್ತರಪ್ರದೇಶ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠವು ಪರಿಶೀಲನೆ ನಡೆಸಿತು.
ಈ ವೇಳೆ ಕೊನೆಯ ನಿಮಿಷದಲ್ಲಿ ವರದಿ ಸಲ್ಲಿಸಿದರೆ ನಾವು ಅದನ್ನು ಹೇಗೆ ಓದಬಹುದು? ಕನಿಷ್ಠ ಒಂದು ದಿನ ಮೊದಲು ಅದನ್ನು ಸಲ್ಲಿಸಿ" ಎಂದು ಮುಖ್ಯ ನ್ಯಾಯಾಧೀಶರು ಕೇಳಿದರು. ಅಲ್ಲದೆ, 44 ಮಂದಿ ಸಾಕ್ಷಿದಾರರ ಪೈಕಿ ಕೇವಲ 4 ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಉಳಿದವರ ಹೇಳಿಕೆಗಳನ್ನೇಕೆ ದಾಖಲಿಸಿಕೊಂಡಿಲ್ಲ ಎಂದು ಕೇಳಿದೆ.
ಈ ವೇಳೆ ಉತ್ತರಿಸಿರುವ ಸರ್ಕಾರದ ಪರ ವಕೀರ ಹರೀಶ್ ಸಾಳ್ವೆಯವರು ಪ್ರತಿಕ್ರಿಯೆ ನೀಡಿ, ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ಹೇಳಇದರು. ಅಲ್ಲದೆ, ಶುಕ್ರವಾರದವರೆಗೆ ಕಾಲಾವಕಾಶ ನೀಡುವಂತೆಯೂ ಮನವಿ ಮಾಡಿಕೊಂಡರು.
ಈ ವೇಳೆ ಸುಪ್ರೀಂ ಕೋರ್ಟ್ ಎಲ್ಲಾ ಸಾಕ್ಷಿಗಳ ಹೇಳಿಕೆಯನ್ನು ರಕ್ಷಿಸಲು ಹಾಗೂ ಹೇಳಿಕೆ ದಾಖಲಿಸಲು ಉತ್ತರಪ್ರದೇಶ ಸರ್ಕಾರಕ್ಕೆ ಆದೇಶಿಸಿದ್ದು 'ಇದು ಅಂತ್ಯವಿಲ್ಲದ ಕಥೆಯಾಗಬಾರದು' ಎಂದು ಹೇಳಿದೆ. ಅಲ್ಲದೆ, ಯಾರನ್ನು ಬಂಧಿಸಲಾಗಿದೆ ಹಾಗೂ ಯಾವ ಅಪರಾಧಕ್ಕೆ ಬಂಧಿಸಲಾಗಿದೆ ಎಂಬ ಕುರಿತು ಸ್ಥಿತಿಗತಿ ವರದಿಯನ್ನು ತಿಳಿಸಿದೆ.
ಅಕ್ಟೋಬರ್ 3ರಂದು ನಡೆದಿದ್ದ ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.
Advertisement