ಪಣಜಿ: ‘ರಾಜಕೀಯ ಪ್ರವಾಸೋದ್ಯಮ’ದ ಭಾಗವಾಗಿ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಹಾಗೂ ಪಕ್ಷದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಶನಿವಾರ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಪ್ರವಾಸೋದ್ಯಮ ಕೇಂದ್ರವಾದ ಥೈಲ್ಯಾಂಡ್ ಅನ್ನು ಬಂದ್ ಮಾಡಲಾಗಿರುವುದರಿಂದ ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಲೇವಡಿ ಮಾಡಿದ್ದಾರೆ.
ಇಂದು ಪಣಜಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ, ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಗೋವಾ ಪ್ರವೇಶಿಸಿದ್ದರೂ, ಆಡಳಿತಾರೂಢ ಬಿಜೆಪಿಯು "ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ರಾಜಕೀಯ ಮಾದರಿ" ಏನು ಅಂತ ಜನರಿಗೆ ತಿಳಿದಿದೆ ಎಂದಿದ್ದಾರೆ.
"ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ ಇಬ್ಬರೂ ರಾಜಕೀಯ ಪ್ರವಾಸಕ್ಕಾಗಿ ಗೋವಾದಲ್ಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಥಾಯ್ಲೆಂಡ್ ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ. ಕೋವಿಡ್ ಕಾರಣದಿಂದಾಗಿ ರಾಹುಲ್ ಗಾಂಧಿಯವರ ಕಷ್ಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅದೇ ರೀತಿ, ರಾಜಕೀಯ ಪ್ರವಾಸಕ್ಕಾಗಿ ಎಎಪಿ ಕೂಡ ಇಲ್ಲಿದೆ" ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
"ಜನರು ಎರಡು ಬಾರಿ (2012 ಮತ್ತು 2017) ಬಿಜೆಪಿಯಲ್ಲಿ ತಮ್ಮ ವಿಶ್ವಾಸವನ್ನು ಮರುಕಳಿಸಿದ್ದಾರೆ. ಈ ಯಾವುದೇ ರಾಜಕೀಯ ಪ್ರವಾಸಿಗರಿಂದ ಗೋವಾದಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಕುಗ್ಗಿಸಲು ಸಾಧ್ಯವಾಗುವುದಿಲ್ಲ. ನಮ್ಮ ಪಕ್ಷ ಮೂರನೇ ಅವಧಿಗೆ(2022 ರಲ್ಲಿ) ಅಧಿಕಾರಕ್ಕೆ ಬರಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
Advertisement