ನವದೆಹಲಿ: ವಿಧಾನಸಭಾ ಚುನಾವಣೆ ನಂತರ ಸಂಭವಿಸಿದ್ದ ಕೊಲೆ, ಅತ್ಯಾಚಾರದಂತಹ ಹೀನ ಪ್ರಕರಣಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸ್ಸಿನ ನಂತರ ಕೊಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಕೇಂದ್ರದ ಆಜ್ಞೆಯಂತೆ ಸಿಬಿಐ ಕೆಲಸ ಮಾಡುತ್ತಿದೆ. ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಎಫ್ ಐಆರ್ ದಾಖಲಾಗುತ್ತಿವೆ. ಸಿಬಿಐನಿಂದ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸಲಾಗದು ಎಂದು ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರ ಆರೋಪಿಸಿದೆ.
ಈ ಹಿಂದೆ, ಪಿಐಎಲ್ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಅನಿಂದ್ಯಾ ಸುಂದರ್ ದಾಸ್ ಆಗಸ್ಟ್ 19 ರಂದು ನೀಡಲಾದ ಹೈಕೋರ್ಟ್ ಆದೇಶ ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದರು. ತನ್ನ ಅರ್ಜಿ ವಿಚಾರಣೆ ನಡೆಯದೆ ರಾಜ್ಯ ಅಥವಾ ಇತರೆ ಅರ್ಜಿಗಳಿಗಳಿಗೆ ಯಾವುದೇ ಆದೇಶ ನೀಡಬಾರದು ಎಂದು ಒತ್ತಾಯಿಸಿದ್ದರು.
ಹಂಗಾಮಿ ಮುಖ್ಯ ನ್ಯಾಯಾಧೀಶ ರಾಜೇಶ್ ಬಿಂದಾಲ್ ನೇತೃತ್ವದ ಹೈಕೋರ್ಟ್ನ ಪಂಚ ನ್ಯಾಯಾಧೀಶರ ಪೀಠ, ಈ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಡೆದಿದ್ದ ಎಲ್ಲಾ ಘೋರ ಅಪರಾಧಗಳ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು.
Advertisement