ನವದೆಹಲಿ: 1984 ರ ಸಿಖ್ ವಿರೋಧಿ ಗಲಭೆಯ ಅಪರಾಧಿಯಾಗಿ ಜೀವಿತಾವಧಿ ಶಿಕ್ಷೆ ಅನುಭವಿಸುತ್ತಿರುವ, ಮಾಜಿ ಸಂಸದ ಸಜ್ಜನ್ ಕುಮಾರ್ನ ಮಧ್ಯಂತರ ಜಾಮೀನು ಅರ್ಜಿ ತಿರಸ್ಕಾರ ಮಾಡಿರುವ ಸುಪ್ರೀಂ ಕೋರ್ಟ್, "ನಿಮ್ಮನ್ನು ವಿಐಪಿ ರೋಗಿಯಂತೆ ನೋಡಲಾಗದು" ಎಂದು ಹೇಳಿದೆ.
ತನ್ನ ಆರೋಗ್ಯ ಸಮಸ್ಯೆ ಹದಗೆಡುತ್ತಿದೆ ಎಂದು ವೈದ್ಯಕೀಯ ಕಾರಣದಕ್ಕೆ ಮಧ್ಯಂತರ ಜಾಮೀನು ನೀಡುವಂತೆ ಸಜ್ಜನ್ ಕುಮಾರರ ಮನವಿ ಮಾಡಿದ್ದಾರೆ. ಈ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅಪರಾಧಿ ಸಜ್ಜನ್ರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎಂಬುವುದುನ್ನು ಗಮನಿಸಿದೆ.
ಕಳೆದ ತಿಂಗಳು ಕೂಡ ಸಜ್ಜನ್ ಕುಮಾರ್ ಪರ ವಕೀಲರು ತಮ್ಮ ಕಕ್ಷಿದಾರರ ಆರೋಗ್ಯ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿದ್ದರು. ಡಿಸೆಂಬರ್ 2018 ರಿಂದ ಎಂಟರಿಂದ 10 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ವಕೀಲರು ಹೇಳಿದ್ದರು. ವಕೀಲರು "ಸಜ್ಜನ್ ಕುಮಾರ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು," ಎಂದು ಮನವಿ ಮಾಡಿದ್ದರು.
ಸಜ್ಜನ್ ಕುಮಾರ್ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಸೆಪ್ಟೆಂಬರ್ 6 ರ ಮೊದಲು ಮಧ್ಯಂತರ ಜಾಮೀನು ಅರ್ಜಿಗೆ ಉತ್ತರಿಸಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚನೆ ನೀಡಿತ್ತು.
ಸಜ್ಜನ್ ಕುಮಾರ್ಗೆ ದೆಹಲಿ ಸಮೀಪದ ಗುರುಗ್ರಾಮದ ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಕೋರಿ ಸಜ್ಜನ್ ಕುಮಾರ್ ಪರ ವಕೀಲರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಆತ ಹೇಯವಾದ ಅಪರಾಧವನ್ನು ಮಾಡಿದಾತ, ಆತನನ್ನು ವಿಐಪಿಯಂತೆ ನೋಡಬೇಕು ಎಂದು ನೀವು ಬಯಸುತ್ತೀರಾ? ಎಂದು ಸುಪ್ರೀಂ ಕೋರ್ಟ್ ವಕೀಲರನ್ನು ಪ್ರಶ್ನಿಸಿದೆ.
75 ವರ್ಷದ ಮಾಜಿ ಕಾಂಗ್ರೆಸ್ ನಾಯಕ ದೆಹಲಿಯ ರಾಜ್ ನಗರದಲ್ಲಿ ಒಂದು ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದು, ನವೆಂಬರ್ 1, 1984 ರಂದು ಗುರುದ್ವಾರಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾರೆ.
Advertisement