ಡೆಹ್ರಾಡೂನ್: ಉತ್ತರಾಖಂಡ್ ಸರ್ಕಾರ ಕೋವಿಡ್-19 ನಿರ್ದಿಷ್ಟ ಕಾರ್ಯತಂತ್ರ ಮಾನದಂಡ (ಎಸ್ಒಪಿ)ಯೊಂದಿಗೆ ಚಾರ್ ಧಾಮ್ ಯಾತ್ರೆಯನ್ನು ಪ್ರಾರಂಭಿಸಿದೆ.
ಚಾರ್ ಧಾಮ್ ಯಾತ್ರೆಯ ಹಿನ್ನೆಲೆಯಲ್ಲಿ ಸರ್ಕಾರ ಸೆ.17 ರಂದು ಎಸ್ಒಪಿಯನ್ನು ಬಿಡುಗಡೆ ಮಾಡಿತ್ತು. "ಚಾರ್ ಧಾಮ್ ದೇವಸ್ಥಾನಮ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಹಾಗೂ ಗರ್ವಾಲ್ ವಿಭಾಗದ ಆಯುಕ್ತರಾದ ರವಿನಾಥ್ ರಮಣ್ ಈ ಬಗ್ಗೆ ಮಾತನಾಡಿದ್ದು, ಚಾರ್ ಧಾಮ್ ಯಾತ್ರೆಗೆ ನಾವು ಎಲ್ಲಾ ರೀತಿಯ ವ್ಯವಸ್ಥೆಯನ್ನು ಸಜ್ಜುಗೊಳಿಸಿದ್ದೇವೆ" ಎಂದು ಹೇಳಿದ್ದಾರೆ.
ಎಸ್ಒಪಿಯ ಪ್ರಕಾರ ಕೇದಾರನಾಥದಲ್ಲಿ ದಿನವೊಂದಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು 1,000ಕ್ಕೆ ಬದರಿನಾಥ್ ನಲ್ಲಿ 800ಕ್ಕೆ, ಗಂಗೋತ್ರಿಯಲ್ಲಿ 600, ಯಮುನೋತ್ರಿಯಲ್ಲಿ 400 ಮಂದಿಗೆ ಸೀಮಿತಗೊಳಿಸಲಾಗಿದೆ.
ನಾಲ್ಕು ಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಯಾತ್ರಾರ್ಥಿಗಳು ಕೋವಿಡ್-19 ಲಸಿಕೆಯ ಪೂರ್ಣವಾಗಿ ಪಡೆದಿರುವ ಪ್ರಮಾಣಪತ್ರ, ಅಥವಾ 72 ಗಂಟೆಗಳಿಗಿಂತ ಹಳೆಯದಾಗಿರದ ಕೋವಿಡ್-19 ನೆಗೆಟೀವ್ ಪ್ರಮಾಣಪತ್ರವನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ.
ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರಗಳಿಂದ ಚಾರ್ ಧಾಮ್ ಯಾತ್ರೆ ಕೈಗೊಳ್ಳುವವರಿಗೆ ಮೇಲೆ ಉಲ್ಲೇಖಿಸಿರುವ ಎಲ್ಲಾ ಪ್ರಮಾಣಪತ್ರಗಳನ್ನೂ ಕಡ್ಡಾಯಗೊಳಿಸಲಾಗಿದೆ.
ಉತ್ತರಾಖಂಡ್ ನಿಂದ ಹೊರ ಭಾಗದ ರಾಜ್ಯಗಳಿಂದ ಚಾರ್ ಧಾಮ್ ಯಾತ್ರೆ ಕೈಗೊಳ್ಳುವವರು ಈ ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಸ್ಥಳೀಯ ಯಾತ್ರಾರ್ಥಿಗಳಿಗೆ ಈ ಪೋರ್ಟಲ್ ನಲ್ಲಿ ನೋಂದಣಿ ಅಗತ್ಯವಿಲ್ಲ. www.badrinath-kedarnath.gov.in ನಲ್ಲಿ ನೋಂದಣಿ ಮಾಡಿಕೊಂಡ ಮರು ದಿನ ಯಾತ್ರಾರ್ಥಿಗಳಿಗೆ ಇ- ಪಾಸ್ ಗಳನ್ನು ವಿತರಿಸಲಾಗುತ್ತದೆ.
Advertisement