ನವದೆಹಲಿ: 12 ರಾಜ್ಯಗಳಲ್ಲಿನ ಸಾರಿಗೆ ಏಜೆನ್ಸಿಗಳಲ್ಲಿ ವಿಶೇಷ ಚೇತನರಿಗಾಗಿ ಒಂದೇ ಒಂದು ಬಸ್ ವ್ಯವಸ್ಥೆಯೂ ಇಲ್ಲ ಎಂಬ ಮಾಹಿತಿಯನ್ನು ಸ್ವತಃ ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ.
ಇದಷ್ಟೇ ಅಲ್ಲದೇ ರಾಜ್ಯದಿಂದ ನಿರ್ವಹಿಸಲ್ಪಡುವ ಶೇ.65 ರಷ್ಟು ಸಾರ್ವಜನಿಕ ಸಾರಿಗೆಯ ಬಸ್ ಗಳಲ್ಲಿ ವಿಶೇಷ ಚೇತನರ ಅಗತ್ಯತೆಗಳನ್ನು ಪೂರೈಸುತ್ತಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಕಾರ 61 ಎಸ್ ಟಿ ಯು ಗಳು 1,45,747 ಬಸ್ ಗಳನ್ನು ನಿರ್ವಹಿಸುತ್ತಿದ್ದು ಈ ಪೈಕಿ ಕೇವಲ 51,043 ಬಸ್ ಗಳಲ್ಲಿ ಮಾತ್ರವೇ ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಬಸ್ ಏರುವ ಹಾಗೂ ಇಳಿಯುವ ವ್ಯವಸ್ಥೆ ಇದೆ.
ರಾಜಸ್ಥಾನ ರಸ್ತೆ ಸಾರಿಗೆ ನಿಗಮ, ಒಡಿಶಾ ರಸ್ತೆ ಸಾರಿಗೆ ನಿಗಮ, ಹರ್ಯಾಣ, ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮೇಘಾಲಯ, ಮಿಜೋರಾಮ್, ಪಂಜಾಬ್, ಸಿಕ್ಕೀಮ್, ಉತ್ತರಾಖಂಡ್ ಹಾಗೂ ದಕ್ಷಿಣ ಬಂಗಾಳ ಸಾರಿಗೆ ನಿಮಗಳ ಬಸ್ ಗಳು ವಿಶೇಷಚೇತನರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಹೊಂದಿಲ್ಲ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಬಿಎಂಟಿಸಿ, ದೆಹಲಿ ಸಾರಿಗೆ ನಿಗಮ, ಜೈಪುರ ಸಿಟಿ ಟಿಎಸ್ಎಲ್, ತಮಿಳುನಾಡು ಕುಂಭಕೋಣಂ, ನವಿ ಮುಂಬೈ ಮುನ್ಸಿಪಲ್ ಟ್ರಾನ್ಸ್ಪೋರ್ಟ್ (ಎನ್ಎಂಎಂಟಿ) ಲಖನೌ ಸಿಟಿ ಸರ್ವಿಸಸ್ ಲಿಮಿಟೆಡ್, ಮೀರತ್ ಸಿಟಿ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್, ಅಲಹಾಬಾದ್ ಸಿಟಿ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್, ವಾರಣಾಸಿ ಸಿಟಿ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್, ಆಗ್ರಾ-ಮಥುರಾ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್, ಕಾನ್ಪುರ್ ಸಿಟಿ ಟ್ರಾನ್ಸ್ಪೋರ್ಟ್ ಸರ್ವಿಸಸ್ ಲಿಮಿಟೆಡ್ ಮತ್ತು ಕೇರಳ ಅರ್ಬನ್ ರೋಡ್ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್ ಗಳಲ್ಲಿ ಮಾತ್ರವೇ ವಿಶೇಷಚೇತನ ವ್ಯಕ್ತಿಗಳಿಗೆ ಅನುಕೂಲವಾಗುವ ಸೌಲಭ್ಯಗಳಿವೆ ಎಂದು ತಿಳಿಸಿದ್ದರು.
1989 ರ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದ ಬಳಿಕವೂ ಬಸ್ ಗಳಲ್ಲಿ ವಿಶೇಷಚೇತನ ಸ್ನೇಹಿ ಪ್ರವೇಶ, ನಿರ್ಗಮನದ ವ್ಯವಸ್ಥೆಗಳು ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಕಾಂಗ್ರೆಸ್ ಸಂಸದ ಅಮೀ ಯಜ್ನಿಕ್ ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಡ್ಕರಿ, ವಿಶೇಷಚೇತನ ಸ್ನೇಹಿ ವ್ಯವಸ್ಥೆಗಳನ್ನು ಅಳವಡಿಸಲು ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
Advertisement