ನವದೆಹಲಿ: ದೆಹಲಿಯಲ್ಲಿ ಜನನಿಬಿಡ ನಡುರಸ್ತೆಯಲ್ಲೇ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯೊಬ್ಬನನ್ನು ಇರಿದು ಕೊಂದ ಘಟನೆ ನಡೆದಿದೆ. ದಾಳಿಯ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ದೆಹಲಿಯ ಮಾಳವೀಯಾ ನಗರದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.
25 ವರ್ಷದ ಮಯಾಂಕ್ ತನ್ನ ಸ್ನೇಹಿತನೊಂದಿಗೆ ಮಾರುಕಟ್ಟೆಯಲ್ಲಿದ್ದಾಗ ನಾಲ್ಕೈದು ಜನ ಚಾಕು ಹಿಡಿದುಕೊಂಡು ಮಯಾಂಕ್ ಕಡೆ ಓಡುವುದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಮಯಾಂಕ್ ರಸ್ತೆಯುದ್ದಕ್ಕೂ ಓಡಲು ಪ್ರಾರಂಭಿಸುವ ಮೊದಲು ಯುವಕರ ಗುಂಪಿನೊಂದಿಗೆ ವಾಗ್ವಾದ ನಡೆಸಿದ್ದಾನೆ. ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಮಯಾಂಕ್, ಗುಂಪಿನ ಯುವಕರನ್ನು ದೂರ ತಳ್ಳಲು ಯತ್ನಿಸುತ್ತಿರುವಾಗ ಅವರು ಚಾಕುಗಳನ್ನು ಮಯಾಂಕ್ ಗೆ ಇರಿದಿದ್ದಾರೆ.
ಜನನಿಬಿಡ ದಕ್ಷಿಣ ದೆಹಲಿ ರಸ್ತೆಯ ಮೂಲಕ ಹಾದುಹೋಗುವ ಜನರು ಮತ್ತು ವಾಹನ ಸವಾರರು ದಾಳಿಯನ್ನು ತಡೆಯಲು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ದಾಳಿಕೋರರು ಆ ಪ್ರದೇಶದಿಂದ ಓಡಿಹೋಗುವ ಮೊದಲು ಮಯಾಂಕ್ಗೆ ಹಲವು ಬಾರಿ ಇರಿದಿರೋದು ಸೆರೆಯಾಗಿದೆ.
ಮಯಾಂಕ್ ಅವರ ಸ್ನೇಹಿತರು ಕೆಲವು ದಾರಿಹೋಕರ ಸಹಾಯದಿಂದ ಆತನನ್ನು ಬಳಿಕ ಏಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ವೇಳೆ ಆತ ಪ್ರಾಣಬಿಟ್ಟ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟ ಕ್ಯಾಮೆರಾ ದೃಶ್ಯಾವಳಿಯಲ್ಲಿರುವ ವ್ಯಕ್ತಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement