ಬೆಂಗಳೂರಿನಲ್ಲಿ ಭಾರಿ ಮಳೆ: ಚರಂಡಿಗಳನ್ನು ಅತಿಕ್ರಮಿಸಿರುವುದೇ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯ ಪ್ರವಾಹಕ್ಕೆ ಕಾರಣ

ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಹರಿದು ಬಂದಿದೆ. ಹಲವು ಕೆರೆಗಳು ತುಂಬಿ ಹರಿದಿದ್ದು, ಮಹದೇವಪುರ ವಲಯದಾದ್ಯಂತ ಪ್ರವಾಹ ಉಂಟಾಗಿದೆ.
ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹ
ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹ

ಬೆಂಗಳೂರು: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಹರಿದು ಬಂದಿದೆ. ಹಲವು ಕೆರೆಗಳು ತುಂಬಿ ಹರಿದಿದ್ದು, ಮಹದೇವಪುರ ವಲಯದಾದ್ಯಂತ ಪ್ರವಾಹ ಉಂಟಾಗಿದೆ. ಅಪಾರ್ಟ್‌ಮೆಂಟ್‌ಗಳು ಮತ್ತು ಐಟಿ ಸಿಟಿಯಲ್ಲಿನ ವಿಲ್ಲಾಗಳಿಗೆ ನೀರು ನುಗ್ಗಿದೆ. ರೇನ್‌ಬೋ ಡ್ರೈವ್ ಲೇಔಟ್‌ನ ವಿಲ್ಲಾಗಳು ನಾಲ್ಕು ತಿಂಗಳೊಳಗೆ ಎರಡನೇ ಬಾರಿಗೆ ಜಲಾವೃತಗೊಂಡಿವೆ. ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಟ್ರಾಕ್ಟರ್ ಹಾಗೂ ದೋಣಿಗಳಲ್ಲಿ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಅನುಗ್ರಹ ಲೇಔಟ್ ಕೂಡ ಜಲಾವೃತಗೊಂಡಿದ್ದು, ಮಹದೇವಪುರದಲ್ಲಿ ಸುಮಾರು 50 ಪೌರಕಾರ್ಮಿಕರ ಶೆಡ್‌ಗಳು ಹೆಚ್ಚು ಹಾನಿಗೊಳಗಾಗಿವೆ. ಮಳೆಯಿಂದಾಗಿ ಹೊರ ವರ್ತುಲ ರಸ್ತೆಯ ಉದ್ದಕ್ಕೂ ಟ್ರಾಫಿಕ್ ಜಾಮ್‌ಗೆ ಕಾಣವಾಯಿತು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಟಿಎನ್‌ಐಇ ಜೊತೆ ಮಾತನಾಡಿ, 'ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಎಂಸಿ) ಕಾಲದಿಂದಲೂ ಈ ಸಮಸ್ಯೆ ವಂಶಪಾರಂಪರ್ಯವಾಗಿ ಬಂದಿದ್ದು, ಇಲ್ಲಿನ ಹಲವು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹೋಗುತ್ತಿದ್ದ ಚರಂಡಿಗಳು ಅತಿಕ್ರಮಣಗೊಂಡಿವೆ' ಎಂದು ಹೇಳಿದರು.

'ಬೆಳ್ಳಂದೂರಿನ ಇಕೋಸ್ಪೇಸ್ ಬಳಿ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹ ಉಂಟಾಗಿರುವುದು ಚರಂಡಿಯನ್ನು ಅತಿಕ್ರಮಿಸಿದ ಪರಿಣಾಮವಾಗಿದೆ. ಈ ಬಗ್ಗೆ ನಿವಾಸಿಗಳು  ಅರಿತುಕೊಂಡು ಸ್ವಲ್ಪ ಭೂಮಿಯನ್ನು ತೆರವುಗೊಳಿಸಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಕಾಲುವೆ ನಿರ್ಮಿಸಲು ಪಾಲಿಕೆಗೆ ಮನವಿ ಮಾಡಿದ್ದಾರೆ. ಬಾಕ್ಸ್‌ಗಳನ್ನು ಹಾಕಿ ಚರಂಡಿಗೆ ಸಂಪರ್ಕ ಕಲ್ಪಿಸಬೇಕು’ ಎಂದು ಗಿರಿನಾಥ್ ಹೇಳಿದರು.

ಮಹದೇವಪುರ ವಲಯದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಮಾತನಾಡಿ, ಮೇ 17 ರಂದು ರೇನ್‌ಬೋ ಡ್ರೈವ್ ವಿಲ್ಲಾಗಳು ಜಲಾವೃತಗೊಂಡ ನಂತರ ಬೆಂಗಳೂರು ಪೂರ್ವ ತಹಶೀಲ್ದಾರ್ ಅತಿಕ್ರಮಣದಾರರಿಗೆ ನೋಟಿಸ್ ಜಾರಿಗೊಳಿಸಿ ಇತ್ತೀಚೆಗೆ ವಿಚಾರಣೆ ನಡೆಸಿದರು. ನೀರನ್ನು ಪಂಪ್ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 'ನಾವು ಒಆರ್‌ಆರ್‌ಸಿಎ ಜೊತೆ ಸಭೆಯನ್ನೂ ನಡೆಸಿದ್ದೇವೆ ಮತ್ತು ಇಕೋಸ್ಪೇಸ್ ಪ್ರದೇಶದಲ್ಲಿ ಭೂಮಿ ಅತಿಕ್ರಮಣದ ಸಮಸ್ಯೆಯನ್ನು ಎತ್ತಿದ್ದೇವೆ. ಈಗ ಪ್ರವಾಹದ ನಂತರ, ಅಧಿಕಾರಿಗಳು ಬಿಬಿಎಂಪಿಯ ಸಹಾಯವನ್ನು ಕೋರಿದ್ದಾರೆ ಮತ್ತು ನೀರಿನ ಕಾಲುವೆಗೆ ದಾರಿ ಮಾಡಿಕೊಡಲು ಭೂಮಿಯ ಭಾಗವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ' ಎಂದು ಅವರು ಹೇಳಿದರು.

ಮಳೆಯಿಂದಾಗಿ ದೊಡ್ಡನೆಕುಂದಿ, ಮುನ್ನೇಕೊಳಲು ಪೌರಕಾರ್ಮಿಕರ ಶೆಡ್‌ಗಳಿಗೂ ನೀರು ನುಗ್ಗಿದೆ. 'ದೊಡ್ಡನೆಕುಂದಿ ಪ್ರದೇಶದಲ್ಲಿ ಸುಮಾರು 100 ಶೆಡ್‌ಗಳು ಜಲಾವೃತವಾಗಿವೆ. ಕಳೆದ ಬಾರಿಯೂ ಇದೇ ರೀತಿ ನಡೆದಿದ್ದು, ಅಧಿಕಾರಿಗಳು ಬಿಬಿಎಂಪಿ ಪೌರಕಾರ್ಮಿಕರಿಗೆ ಸೂಕ್ತ ಮನೆಗಳ ಭರವಸೆ ನೀಡಿದ್ದರು, ಆದರೆ ಯಾವುದೇ ಪ್ರಗತಿಯಾಗಿಲ್ಲ ಎಂದು ಪೌರಕಾರ್ಮಿಕರ ಮುಖಂಡ ಷಣ್ಮುಗಂ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com