ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಪದಗಳನ್ನು ಬಳಸುವುದು ಕಾಂಗ್ರೆಸ್ಗೆ ಹೊಸ ಅಭ್ಯಾಸವಾಗಿದೆ ಎಂದು ಬಿಜೆಪಿ ಶನಿವಾರ ಕಿಡಿಕಾರಿದೆ.
ಕರ್ನಾಟಕದ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಅವರು, ಮೋದಿಯನ್ನು ಭಾರತೀಯ ಪುರಾಣಗಳಲ್ಲಿ ಬರುವ ರಾಕ್ಷಸ 'ಭಸ್ಮಾಸುರ' ಎಂದು ಕರೆದಿದ್ದು, ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರನ್ನು ರಾವಣನಿಗೆ ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ, 'ಕಾಂಗ್ರೆಸ್ ಮಟ್ಟಿಗೆ ಇದು ಸಾಮಾನ್ಯ ಸಂಗತಿಯಾಗಿದೆ. ಕಾಂಗ್ರೆಸ್ ಅಸಭ್ಯ ಪಕ್ಷವಾಗಿ ಮಾರ್ಪಟ್ಟಿದೆ' ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಭಾರತವು ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಈ ಹೊತ್ತಲ್ಲಿ ನಾನು ತನ್ನ 'ಸ್ನೇಹಿತ' ಮೋದಿಯೊಂದಿಗೆ ನಿಂತಿದ್ದೇನೆ ಎಂದಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿಕೆ ಉಲ್ಲೇಖಿಸಿದ ಪಾತ್ರಾ, 'ಒಂದು ಕಡೆ ಜಗತ್ತು ತಮ್ಮೊಂದಿಗೆ ನಿಂತಿದೆ ಮತ್ತು ಇನ್ನೊಂದು ಕಡೆ ಕಾಂಗ್ರೆಸ್ ಅಂತಹ ಭಾಷೆಯನ್ನು ಬಳಸುತ್ತಿದೆ. ಇದು ದುಃಖಕರ ಮತ್ತು ಕಳವಳಕಾರಿಯಾಗಿದೆ' ಎಂದು ಹೇಳಿದರು.
'ಕಾಂಗ್ರೆಸ್ ಮೋದಿಯ ಮೇಲೆ '100 ನಿಂದನೆಗಳನ್ನು' ಎಸೆದಿದೆ ಮತ್ತು ಈಗ ನಡೆಯುತ್ತಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷವನ್ನು ಪ್ರಜಾಸತ್ತಾತ್ಮಕವಾಗಿ ಮುಗಿಸಲು ಜನರು ಶ್ರೀಕೃಷ್ಣನಂತೆ 'ಸುದರ್ಶನ ಚಕ್ರ'ವನ್ನು ಪ್ರಯೋಗಿಸುತ್ತಾರೆ ಎಂದು ಹೇಳಿದರು.
Advertisement