ಆಂಧ್ರದಲ್ಲಿ ಬೆಚ್ಚಿ ಬೀಳಿಸೋ ಕೊಲೆ; ಡ್ರಮ್ ನಲ್ಲಿ ಮಹಿಳೆಯ ದೇಹದ ತುಂಡು-ತುಂಡು ಭಾಗಗಳು ಪತ್ತೆ!
ಇಡೀ ದೇಶವನ್ನೇ ಬೆಚ್ಚಿ ಬೀಸಿರುವ ದೆಹಲಿಯ ಶ್ರದ್ಧಾ ವಾಲ್ಕರ್ ಕೊಲೆಗೂ ಮುನ್ನ ಅಂತಹುದೇ ರೀತಿಯ ಕೊಲೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿತ್ತು ಎಂಬ ಆಘಾತಕಾರಿ ಮಾಹಿತಿ ಇದೀಗ ಹೊರಬಂದಿದೆ.
Published: 05th December 2022 11:58 AM | Last Updated: 05th December 2022 02:24 PM | A+A A-

ಡ್ರಮ್ ನಲ್ಲಿ ಮಹಿಳೆ ಶವ
ಹೈದರಾಬಾದ್: ಇಡೀ ದೇಶವನ್ನೇ ಬೆಚ್ಚಿ ಬೀಸಿರುವ ದೆಹಲಿಯ ಶ್ರದ್ಧಾ ವಾಲ್ಕರ್ ಕೊಲೆಗೂ ಮುನ್ನ ಅಂತಹುದೇ ರೀತಿಯ ಕೊಲೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿತ್ತು ಎಂಬ ಆಘಾತಕಾರಿ ಮಾಹಿತಿ ಇದೀಗ ಹೊರಬಂದಿದೆ.
ಹೌದು.. ದೆಹಲಿಯ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ದೆಹಲಿಯಲ್ಲಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್ ಅನ್ನು ಕೊಂದು ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಈ ಸುದ್ದಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇಂತಹ ಹಲವು ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿದೆ. ಇದೀಗ ಈ ಪಟ್ಟಿಗೆ ನೆರೆಯ ಆಂಧ್ರ ಪ್ರದೇಶ ಕೂಡ ಸೇರ್ಪಡೆಯಾಗಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್ನಲ್ಲಿ ಮಹಿಳೆಯ ದೇಹದ ತುಂಡು-ತುಂಡು ಭಾಗಗಳು ಪತ್ತೆಯಾಗಿವೆ. ಮೃತದೇಹ ಸುಮಾರು ಒಂದು ವರ್ಷದಿಂದ ಇದೆ ಎಂದು ಪೊಲೀಸರು ಶಂಕಿಸಿದ್ದು, ವರ್ಷದ ಹಿಂದೆ ಕೊಂದು ಆಕೆಯ ದೇಹವನ್ನು ತುಂಡು-ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಸ್ಗಾಗಿ ಕಾಯುತ್ತಿದ್ದ ಜನರ ಮೇಲೆ ಹರಿದ ಟ್ರಕ್; 6 ಮಂದಿ ದಾರುಣ ಸಾವು, 8 ಜನರಿಗೆ ಗಂಭೀರ ಗಾಯ
ವಿಶಾಖಪಟ್ಟಣಂನ ಮಧುರವಾಡದ ಕೊಮ್ಮಾಡಿ ಅಂಗವಿಕಲರ ಕಾಲೋನಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಮನೆಯಲ್ಲಿದ್ದ ಬಾಡಿಗೆದಾರರು ತಿಂಗಳಾನುಗಟ್ಟಲೆ ಮನೆ ಬಾಡಿಗೆ ಕಟ್ಟದೇ ಮನೆಗೆ ಬೀಗ ಹಾಕಿ ಹೋಗಿದ್ದರು. ಹಲವು ತಿಂಗಳುಗಳೇ ಕಳೆದರೂ ಅವರು ಬಾರದ ಹಿನ್ನಲೆಯಲ್ಲಿ ಮನೆ ಮಾಲೀಕರು ಮನೆ ಬೀಗ ಒಡೆದು ಮನೆ ಖಾಲಿ ಮಾಡಿಸಲು ಮುಂದಾದಾಗ ಮನೆಯಲ್ಲಿದ್ದ ಡ್ರಮ್ ನಲ್ಲಿ ಮಹಿಳೆಯ ಅಸ್ತಿಪಂಜರ ಪತ್ತೆಯಾಗಿದೆ. ಹೆಣ ನೋಡುತ್ತಲೇ ಹೌಹಾರಿದ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮುಂಬೈ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹರಿತ ಆಯುಧಗಳಿಂದ ಹಲ್ಲೆ
ಮೂಲಗಳ ಪ್ರಕಾರ ಜೂನ್ 2021 ರಲ್ಲಿ, ಬಾಡಿಗೆದಾರನು ಹೆಂಡತಿಯ ಹೆರಿಗೆ ವಿಚಾರ ಹೇಳಿ ಊರಿಗೆ ಹೋಗಿದ್ದ. ಇದಾದ ಬಳಿಕ ಒಂದೆರಡು ಬಾರಿ ಮನೆಗೆ ಆಗಮಿಸಿದ್ದ. ಈ ವೇಳೆ ಮನೆ ಮಾಲೀಕರು ಬಾಡಿಗೆ ವಿಚಾರಿಸಿದಾಗ ಏನು ಒಂದು ನೆಪ ಹೇಳಿ ಮುಂದೂಡಿದ್ದ. ಇದೀಗ ಸುಮಾರು 3 ತಿಂಗಳಿನಿಂದ ಆತ ಪತ್ತೆಯಿಲ್ಲ. ಹೀಗಾಗಿ ನಿನ್ನೆ ಮನೆ ಮಾಲೀಕರು ಮನೆ ಖಾಲಿ ಮಾಡಿಸಲು ಮನೆಯಲ್ಲಿದ್ದ ವಸ್ತುಗಳನ್ನು ಹೊರಗೆ ಹಾಕಲು ನಿರ್ಧರಿಸಿ ಬಾಗಿಲು ಒಡೆದಾಗ ಮನೆಯಲ್ಲಿದ್ದ ಡ್ರಮ್ ನಿಂದ ದುರ್ವಾಸನೆ ಬರುತ್ತಿತ್ತು. ಅದನ್ನು ತೆರೆದಾಗ ಅಲ್ಲಿ ಮೃತದೇಹ ಪತ್ತೆಯಾಗಿತ್ತು ಎಂದು ಮನೆ ಮಾಲೀಕರು ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ಗ್ಯಾಂಗ್ ಸ್ಟಾರ್ ರಾಜು ಥೇಟ್ ಹತ್ಯೆ ಪ್ರಕರಣ, ಐವರು ಆರೋಪಿಗಳ ಬಂಧನ
ಪ್ರಕರಣ ದಾಖಲಿಸಿಕೊಂಡಿರುವ ವಿಶಾಖಪಟ್ಟಣಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸಿಎಚ್. ಶ್ರೀಕಾಂತ್ ತಿಳಿಸಿದ್ದಾರೆ.