ಬೆತುಲ್: ಹಣ ಕದ್ದಿರುವ ಶಂಕೆ ಮೇಲೆ 5ನೇ ತರಗತಿಯ ವಿದ್ಯಾರ್ಥಿನಿಗೆ ಹಾಸ್ಟೆಲ್ ಅಧೀಕ್ಷಕಿಯ ಸೂಚನೆ ಮೇರೆಗೆ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಮಧ್ಯಪ್ರದೇಶದ ಬೆತುಲ್ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಮ್ಜಿಪುರ ಗ್ರಾಮದ ಸರ್ಕಾರಿ ಗಿರಿಜನ ಬಾಲಕಿಯರ ವಸತಿ ನಿಲಯದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ.
ಈ ಬಗ್ಗೆ ದೂರು ನೀಡಲು ಬಾಲಕಿಯ ಕುಟುಂಬಸ್ಥರು ಮಂಗಳವಾರ ಜಿಲ್ಲಾಧಿಕಾರಿ ಅಮನ್ವೀರ್ ಸಿಂಗ್ ಬೈನ್ಸ್ ಕಚೇರಿಗೆ ತೆರಳಿದ್ದರು. ಬಾಲಕಿಯ ತಂದೆಯ ದೂರನ್ನು ಆಲಿಸಿದ ಬೇನ್ಸ್ ಅವರು ತನಿಖೆಗೆ ಆದೇಶಿಸಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೂರಿನ ಹಿನ್ನೆಲೆಯಲ್ಲಿ ಹಾಸ್ಟೆಲ್ ಸೂಪರಿಂಟೆಂಡೆಂಟ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತೆ ಶಿಲ್ಪಾ ಜೈನ್ ತಿಳಿಸಿದ್ದಾರೆ.
ದಾಮ್ಜಿಪುರದಲ್ಲಿ ಬುಡಕಟ್ಟು ವ್ಯವಹಾರಗಳ ಇಲಾಖೆ ನಡೆಸುತ್ತಿರುವ ಹಾಸ್ಟೆಲ್ನಲ್ಲಿ 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ತನ್ನ ಮಗಳು ಆಕೆಯನ್ನು ಭೇಟಿಯಾಗಲು ಹೋದಾಗ ನಡೆದ ಘಟನೆಯ ಬಗ್ಗೆ ತಿಳಿಸಿರುವುದಾಗಿ ಬಾಲಕಿಯ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತನ್ನ ಮಗಳಿಗೆ ದೆವ್ವದಂತೆ ಕಾಣುವ ರೀತಿಯಲ್ಲಿ ಮೇಕಪ್ ಮಾಡಿ, ಮತ್ತೊಬ್ಬ ಬಾಲಕಿಯ 400 ರೂ.ಗಳನ್ನು ಕದ್ದ ಆರೋಪದ ಮೇಲೆ ಸೂಪರಿಂಟೆಂಡೆಂಟ್ ಪಾದರಕ್ಷೆಗಳ ಹಾರವನ್ನು ಹಾಕಿ ಹಾಸ್ಟೆಲ್ ಆವರಣದಲ್ಲಿ ಮೆರವಣಿಗೆ ಮಾಡಿದ್ದಾರೆ. ಘಟನೆಯ ನಂತರ, ತಮ್ಮ ಮಗಳು ಹಾಸ್ಟೆಲ್ನಲ್ಲಿ ಉಳಿಯಲು ನಿರಾಕರಿಸಿದಳು ಎಂದಿದ್ದಾರೆ.
ಸದ್ಯ ತನಿಖೆಗೆ ಆದೇಶಿಸಲಾಗಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜೈನ್ ತಿಳಿಸಿದ್ದಾರೆ.
Advertisement