ಪುಣೆ ಬಂದ್: ಶಿವಾಜಿ ಮಹಾರಾಜ್, ಇತರರ ವಿರುದ್ಧ ಟೀಕೆ ವಿರೋಧಿಸಿ ಮೌನ ಮೆರವಣಿಗೆ
ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಜ್ಯದ ಇತರ ಅಪ್ರತಿಮ ನಾಯಕರ ವಿರುದ್ಧದ ಹೇಳಿಕೆಗಳನ್ನು ಖಂಡಿಸಿ ಪ್ರತಿಪಕ್ಷಗಳು ಮಂಗಳವಾರ ಪುಣೆ `ಬಂದ್' ಕರೆ ನೀಡಿದ್ದು, ಬೆಳಗ್ಗೆಯಿಂದ ಪುಣೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
Published: 13th December 2022 04:59 PM | Last Updated: 13th December 2022 04:59 PM | A+A A-

ಪುಣೆ ಬಂದ್
ಪುಣೆ: ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಜ್ಯದ ಇತರ ಅಪ್ರತಿಮ ನಾಯಕರ ವಿರುದ್ಧದ ಹೇಳಿಕೆಗಳನ್ನು ಖಂಡಿಸಿ ಪ್ರತಿಪಕ್ಷಗಳು ಮಂಗಳವಾರ ಪುಣೆ `ಬಂದ್' ಕರೆ ನೀಡಿದ್ದು, ಬೆಳಗ್ಗೆಯಿಂದ ಪುಣೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಮಹಾರಾಷ್ಟ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಈ ಬಂದ್ ಬೆಂಬಲಿಸದಿದ್ದರೂ, ಬಿಜೆಪಿ ರಾಜ್ಯಸಭಾ ಸದಸ್ಯ ಶಿವಾಜಿ ಮಹಾರಾಜರ ವಂಶಸ್ಥ ಉದಯನರಾಜೆ ಭೋಸಲೆ ಅವರು ಪ್ರತಿಪಕ್ಷಗಳು ಆಯೋಜಿಸಿದ್ದ ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ: ಛತ್ರಪತಿ ಶಿವಾಜಿ ಕುರಿತು ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ದೆಹಲಿಗೆ ಬುಲಾವ್
ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಬಳಿ ಆರಂಭವಾದ ಮೌನ ಮೆರವಣಿಗೆ ನಗರದ ಲಾಲ್ ಮಹಲ್ನಲ್ಲಿ ಕೊನೆಗೊಳ್ಳಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಶಿವಸೇನಾ ನಾಯಕಿ ಸುಷ್ಮಾ ಅಂಧಾರೆ ಕೂಡ ಭಾಗವಹಿಸಿದ್ದರು.
ಕಾಂಗ್ರೆಸ್, ಎನ್ಸಿಪಿ, ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಸಂಭಾಜಿ ಬ್ರಿಗೇಡ್ ಮತ್ತು ಇತರ ಕೆಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಸಾರ್ವಜನಿಕ ಸಮಾರಂಭದಲ್ಲಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರನ್ನು "ಹಳೆಯ ಕಾಲದ ಐಕಾನ್" ಎಂದು ಟೀಕಿಸಿದ್ದು, ಅವರ ವಿವಾದಾತ್ಮಕ ಹೇಳಿಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ವಿರುದ್ಧ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ನೀಡಿದ್ದ ಹೇಳಿಕೆ ಖಂಡಿಸಿ ಇಂದು ಪುಣೆ ಬಂದ್ ಕರೆ ನೀಡಲಾಗಿದೆ.