ನಾಗಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಜವಾಬ್ದಾರಿಯುತ ಹೇಳಿಕೆಯನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಕರ್ನಾಟಕಕ್ಕೆ ನೀರು ಹರಿಸುವ ಬಗ್ಗೆ ಮರು ಪರಿಶೀಲಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಂಡದೊಂದಿಗೆ ಸಮನ್ವಯತೆಗಾಗಿ ಕ್ಯಾಬಿನೆಟ್ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರನ್ನು ನೋಡಲ್ ಸಚಿವರನ್ನಾಗಿ ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ನೇಮಕ ಮಾಡಿತ್ತು.
ವಿಧಾನ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ದೇಸಾಯಿ, ಮಹಾರಾಷ್ಟ್ರಕ್ಕೆ ಒಂದು ಇಂಚು ಭೂಮಿಯನ್ನು ನೀಡಲ್ಲ ಎಂಬ ಕರ್ನಾಟಕ ಸರ್ಕಾರದ ನಿಲುವು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ಗಡಿ ವಿವಾದ ಮುಗಿದ ಕತೆಯಾಗಿದ್ದು, ಮಹಾರಾಷ್ಟ್ರಕ್ಕೆ ಒಂದು ಇಂಚು ಕೂಡಾ ಭೂಮಿ ನೀಡಲ್ಲ ಎಂಬ ನಿಲುವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಸದನದಲ್ಲಿ ಪುನರುಚ್ಚರಿಸಿದರು. ಮಹಾರಾಷ್ಟ್ರದ ಗಡಿ ಖ್ಯಾತೆ ಬಗ್ಗೆ ಉಭಯ ಸದನಗಳಲ್ಲಿ ಖಂಡನಾ ನಿರ್ಣಯ ಮಂಡಿಸಲು ತೀರ್ಮಾನಿಸಲಾಯಿತು.
ಇಂತಹ ಹೇಳಿಕೆಗಳು ಸಾಂವಿಧಾನಿಕ ಹುದ್ದೆಯಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ಶೋಭೆ ತರುವುದಿಲ್ಲ. ಗಡಿ ವಿವಾದ ಕೋರ್ಟ್ ನಲ್ಲಿರುವಾಗ ಬೊಮ್ಮಾಯಿ ಅವರ ಇಂತಹ ಬೆದರಿಕೆ ಭಾಷೆ ಒಳ್ಳೆಯದಲ್ಲ.ಅದನ್ನು ಅವರು ನಿಲ್ಲಿಸಬೇಕು ಎಂದು ದೇಸಾಯಿ ಹೇಳಿದರು. ಮಹಾರಾಷ್ಟ್ರ ಕೂಡಾ ಇದೇ ಭಾಷೆಯಲ್ಲಿ ಪ್ರತಿಕ್ರಿಯಿಸಬಹುದು ಆದರೆ, ನಾವು ಪ್ರಚೋದಿಸುವುದಿಲ್ಲ ಎಂದು ಅವರು ತಿಳಿಸಿದರು.
ಮಹಾರಾಷ್ಟ್ರ ತಾಳ್ಮೆ ವಹಿಸಿದೆ. ಬೇಸಿಗೆ ಅವಧಿಯಲ್ಲಿ ಕರ್ನಾಟಕ ಕೊಂಕಣ ಮತ್ತು ಕೃಷ್ಣ ಅಣೆಕಟ್ಟುಗಳ ನೀರಿನ ಹೆಚ್ಚಿನ ರೀತಿಯಲ್ಲಿ ಅವಲಂಬಿತರಾಗಿರುವುದನ್ನು ಸಿಎಂ ಬೊಮ್ಮಾಯಿ ಗಮನದಲ್ಲಿಟ್ಟುಕೊಳ್ಳಬೇಕು, ಇಂತಹ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸದಿದ್ದರೆ, ಕರ್ನಾಟಕಕ್ಕೆ ನೀರು ಪೂರೈಕೆ ಬಗ್ಗೆ ಮಹಾರಾಷ್ಟ್ರ ಮರು ಚಿಂತಿಸಲಾಗುವುದು ಎಂದು ಹೇಳಿದರು.
Advertisement